ಬೆಂಗಳೂರು: ಪಂಡಿತ್ ವಿನಾಯಕ ತೊರವಿ ಅವರಿಗೆ 2022ರ ನಿರ್ಮಾಣ್–ಪುರಂದರ ಸಂಗೀತರತ್ನ ಪ್ರಶಸ್ತಿಯನ್ನು ಭಾನುವಾರ ಪ್ರದಾನ ಮಾಡಲಾಯಿತು.
ನಿರ್ಮಾಣ್ ಶೆಲ್ಟರ್ರ್ಸ್ ಮತ್ತು ‘ವಿಎಲ್ಎನ್-ನಿರ್ಮಾಣ್-ಪುರಂದರ ಪ್ರತಿಷ್ಠಾನ’ವು ನಿಸರ್ಗ ಬಡಾವಣೆಯಲ್ಲಿ ಹಮ್ಮಿಕೊಂಡಿದ್ದ ಪುರಂದರದಾಸರ ಆರಾಧನಾ ಮಹೋತ್ಸವದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಪಂಡಿತ್ ವಿನಾಯಕ ತೊರವಿ ಮತ್ತು ತಂಡದವರಿಂದ ದಾಸವಾಣಿ ಕಾರ್ಯಕ್ರಮವೂ ಜರುಗಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪಂಡಿತ್ ವಿನಾಯಕ ತೊರವಿ ಅವರು, ‘ಈ ಪ್ರಶಸ್ತಿಯನ್ನು ತಮ್ಮ ಗುರುಗಳಾದ ದಿ. ಭೀಮಸೇನ ಜೋಷಿ ಅವರ ಪಾದಕ್ಕೆ ಸಮರ್ಪಿಸಲಾಗುವುದು’ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಡಾ. ವೆಂಕಟೇಶ ನವಲಿ ಸಂಪಾದಿತ ಕೃತಿ ದಾಸಸಾಹಿತ್ಯ ಸಾಧಕ ಪಾರ್ಥಸಾರಥಿ ವಿಠಲದಾಸರು ಮತ್ತು ಡಾ. ಅರಳು ಮಲ್ಲಿಗೆ ಪಾರ್ಥಸಾರಥಿ ಅವರ ಜೀವನ-ಚೇತನ-ಸಾಧನ ಕುರಿತಾದ ಕೃತಿ ಲೋಕಾರ್ಪಣೆ ಮಾಡಲಾಯಿತು.
ಸಮಾರಂಭದಲ್ಲಿ ವ್ಯಾಸರಾಜ ಮಠದ ವಿದ್ಯಾಶ್ರೀಶ ತೀರ್ಥ ಶ್ರೀಪಾದರು, ಅರಳುಮಲ್ಲಿಗೆ ಪಾರ್ಥಸಾರಥಿ, ವಿದ್ಯಾಭೂಷಣ, ನಿರ್ಮಾಣ್ ಶೆಲ್ಟರ್ಸ್ನ ನಿರ್ದೇಶಕ ಎಸ್. ಎಂ. ಪಾಟೀಲ್, ಆರ್. ಮೋಹನ್ ಹಾಗೂ ನಿರ್ಮಾಣ್ ಸಮೂಹ ಸಂಸ್ಥೆಗಳ ಸಂಸ್ಥಾಪಕರಾದ ವಿ. ಲಕ್ಷ್ಮೀನಾರಾಯಣ್ ಇದ್ದರು.
ಪುರಂದರ ದಾಸರ ಹೆಸರಿನಲ್ಲಿ ಪ್ರತಿವರ್ಷವೂ ಒಂದು ಪ್ರಶಸ್ತಿಯನ್ನು ಸಂಗೀತ ವಿದ್ವಾಂಸರೊಬ್ಬರಿಗೆ, ಅದರಲ್ಲೂ ಭಕ್ತಿಗಾಯನ ಪ್ರಸರಣದಲ್ಲಿ ಸೇವೆ ಮಾಡಿರುವ ಕಲಾವಿದರಿಗೆ ನೀಡಿ ಭಕ್ತಿ ಸಂಗೀತ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ಯೋಜನೆಯನ್ನು ನಿರ್ಮಾಣ್ ಸಮೂಹ ಸಂಸ್ಥೆ ಕೈಗೊಂಡಿದೆ.
‘ವಿಎಲ್ಎನ್-ನಿರ್ಮಾಣ್-ಪುರಂದರ ಪ್ರತಿಷ್ಠಾನ’ವನ್ನು ನಿರ್ಮಾಣ್ ಸಮೂಹ ಸಂಸ್ಥೆಗಳ ಸಂಸ್ಥಾಪಕರಾದ ವಿ. ಲಕ್ಷ್ಮೀನಾರಾಯಣ್ ಅವರು ಆರಂಭಿಸಿದ್ದಾರೆ.