ಬೆಂಗಳೂರು: ‘ಇದು ಎಲ್ಲ ಭಾರತೀಯರ ಪ್ರತಿಭಟನೆ. ಇದರಲ್ಲಿ ಜಾತಿ–ಧರ್ಮ ತರಬೇಡಿ’ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ವಿನಂತಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾವು ಇಲ್ಲೇ ಹುಟ್ಟಿದವರು. ಆದರೆ ಈಗ ನಿಮ್ಮ ಪೌರತ್ವ ಸಾಬೀತುಪಡಿಸಿ ಎಂದರೆ ಹೇಗೆ ಸಾಧ್ಯ.ನನ್ನ ಜನ್ಮದಿನಾಂಕದ ಮಾಹಿತಿಯೇ ಸರಿಯಾಗಿ ಇಲ್ಲ. ಇನ್ನು ನನ್ನ ಅಪ್ಪ–ತಾತನ ವಿವರ ಎಲ್ಲಿಂದ ತರಲಿ’ಎಂದು ಪ್ರಶ್ನಿಸಿದರು.
‘ಕೇಂದ್ರ ಸರ್ಕಾರ ಜಾರಿ ಮಾಡಿರುವ ಪೌರತ್ವ ತಿದ್ದುಪಡಿ ಮತ್ತು ರಾಷ್ಟ್ರೀಯ ನೋಂದಣಿ ಕಾಯ್ದೆಗಳಿಂದ ದೇಶಕ್ಕೆ ಏನಾದರೂ ಉಪಯೋಗವಿದೆಯೇ ಮೊದಲು ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದರು. ಕರ್ನಾಟಕದಲ್ಲಿ ಹಿಂದೂ–ಮುಸ್ಲಿಮರು ಅಣ್ಣತಮ್ಮಂದಿರಂತೆ ಬಾಳ್ತಿದ್ದೇವೆ. ನಮ್ಮ ನಡುವೆ ಜಾತಿ–ಧರ್ಮ ತರಬೇಡಿ. ರಾಜಕೀಯ ಲಾಭಕ್ಕಾಗಿ ಸಮಾಜ ಹಾಳುಮಾಡಬೇಡಿ’ಎಂದು ವಿನಂತಿಸಿದರು.
‘ಮೊದಲು ಪ್ರತಿಭಟನೆಗೆ ಅನುಮತಿ ಕೊಟ್ಟು ನಂತರ ಹಿಂಪಡೆದದ್ದು ಈ ಎಲ್ಲ ಗೊಂದಲಗಳಿಗೆ ಮೂಲ ಕಾಋಣ. ಈ ದೇಶದಲ್ಲಿ ಪ್ರತಿಭಟನೆ ಮಾಡೋದು ಎಲ್ಲರಿರೂ ಇರುವ ಹಕ್ಕು. ಅದನ್ನು ಕಿತ್ತುಕೊಳ್ಳಲು ಇವರು ಯಾರು. ಇಲ್ಲೇನು ಹಿಟ್ಲರ್ ಆಡಳಿತ ನಡೆಯುತ್ತಿದೆಯೇ’ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ನಾಯಕರೊಂದಿಗೆ ಮಂಗಳೂರಿಗೆ ಭೇಟಿ ನೀಡಿ ಮೃತರ ಕುಟುಂಬಗಳ ಸದಸ್ಯರನ್ನು ಭೇಟಿಯಾಗಿ ಸಾಂತ್ವನ ಹೇಳುತ್ತೇವೆ. ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತೇವೆ ಎಂದು ತಿಳಿಸಿದರು.