ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ನೆಟ್ಟಿರುವ ಗಿಡಗಳು ಬಿಸಿಲಿನಿಂದ ಸೊರಗುತ್ತಿರುವ ಬಗ್ಗೆ ‘ಪ್ರಜಾವಾಣಿ’ಯ ಸೋಮವಾರದ ಸಂಚಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿ ಗಮನ ಸೆಳೆದ ಬಳಿಕ ಪ್ರಾಧಿಕಾರವು ಎಚ್ಚೆತ್ತು ಕೊಂಡಿದೆ. ಗಿಡಗಳಿಗೆ ನೀರುಣಿಸಲು ವ್ಯವಸ್ಥೆ ಮಾಡಿದೆ.
ಬಿಡಿಎ ಆಯುಕ್ತ ಜಿ.ಸಿ.ಪ್ರಕಾಶ್ ಅವರು ಪ್ರಾಧಿಕಾರದ ಅರಣ್ಯ ವಿಭಾಗದ ಅಧಿಕಾರಿಗಳಿಂದ ಈ ಬಗ್ಗೆ ವಿವರಣೆ ಪಡೆದು, ಈ ಬಡಾವಣೆಯ ಹಸಿರೀಕರಣಕ್ಕೆ ಸೂಕ್ತ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದರು.
‘ನೆಟ್ಟಿರುವ ಸಸಿಗಳ ಪೋಷಣೆಗೆ ಸೂಕ್ತ ಕ್ರಮಕೈಗೊಂಡಿದ್ದೇವೆ. ಕೆಲವು ಗಿಡಗಳು ಬೇಸಿಗೆಯಲ್ಲಿ ಎಲೆ ಉದುರಿಸುತ್ತವೆ. ಹಾಗಾಗಿ ಅವು ಸತ್ತಿರುವಂತೆ ಕಾಣಿಸಬಹುದು ಎಂದು ಪ್ರಾಧಿಕಾರದ ಅರಣ್ಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ’ ಎಂದು ಬಿಡಿಎ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.