ಕೆಂಗೇರಿ: ‘ರಾಜ್ಯದಲ್ಲಿ ಪ್ರಸ್ತುತ 1.10 ಲಕ್ಷ ಎಕರೆ ಪ್ರದೇಶದಲ್ಲಿ ಸಾವಯವ ಕೃಷಿ ಪದ್ಧತಿ ಅಳವಡಿಸಲಾಗಿದೆ. ಇನ್ನೂ 1.50 ಲಕ್ಷ ಎಕರೆ ಪ್ರದೇಶಗಳಿಗೆ ಈ ಪದ್ಧತಿಯ ಬೇಸಾಯವನ್ನು ವಿಸ್ತರಿಸಲು ಚಿಂತನೆ ನಡೆಸಲಾಗಿದೆ’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.
ಆರ್ಟ್ ಆಫ್ ಲಿವಿಂಗ್ನಲ್ಲಿ ಶನಿವಾರ ಆಯೋಜಿಸಲಾಗಿದ್ದ ‘ಶ್ರೀಶ್ರೀ ಸಾವಯವ ಕೃಷಿ ಮೇಳ 2020’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕೇವಲ ಅರ್ಧ ಎಕರೆಯಲ್ಲಿ ಸುಮಾರು 70 ರೀತಿಯ ತರಕಾರಿಗಳನ್ನು ಬೆಳೆಯುವ ಪದ್ಧತಿ ರೂಢಿಸಿಕೊಂಡಿರುವ ಆರ್ಟ್ ಆಫ್ ಲಿವಿಂಗ್ ಆಶ್ರಮದ ಕ್ರಮ ಎಲ್ಲಾ ರೈತರಿಗೂ ಮಾದರಿಯಾಗಲಿ’ ಎಂದರು.
ಶ್ರೀಶ್ರೀ ರವಿಶಂಕರ್ ಗುರೂಜಿ, ‘ಸಿಕ್ಕಿಂ ಮತ್ತು ಛತ್ತೀಸಗಡದಲ್ಲಿ ಸಾವಯವ ಬೇಸಾಯ ಪದ್ಧತಿ ವ್ಯಾಪಕವಾಗಿ ಬಳಕೆಯಲ್ಲಿದೆ. ದೇಶದ ಉಳಿದ ಭಾಗದಲ್ಲೂ ಇದೇ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ರಾಷ್ಟ್ರವನ್ನು ರಾಸಾಯನಿಕ ಮುಕ್ತ ಕೃಷಿ ಪ್ರದೇಶವನ್ನಾಗಿ ಮಾಡಬೇಕಾಗಿದೆ. ಇದರಿಂದ ಆರೋಗ್ಯವೂ ವೃದ್ಧಿಸುತ್ತದೆ’ ಎಂದರು.
‘ನಾಡಿನ ಜಲ–ನೆಲವನ್ನು ನಾವು ಕಲುಷಿತಗೊಳಿಸಿದ್ದೇವೆ. ನಾಡು, ನುಡಿ, ನೆಲ ಜಲವನ್ನು ರಕ್ಷಿಸುವುದೇ ನಿಜವಾದ ಶಿವಪೂಜೆ ಎಂದರು. ಮಧ್ಯವರ್ತಿಗಳ ಹಾವಳಿ ತಪ್ಪಿದರೆ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಗ್ರಾಹಕನ ಜೇಬಿಗೂ ಹೊರೆ ತಪ್ಪಲಿದೆ’ ಎಂದು ತಿಳಿಸಿದರು.
ಶ್ರೀಶ್ರೀ ಇನ್ಸ್ಟಿಟ್ಯೂಟ್ ಆಫ್ ಅಗ್ರಿಕಲ್ಚರ್ ವತಿಯಿಂದ ಅಗ್ರಿ ಬಿಸಿನೆಸ್ ಕೋರ್ಸ್ ಆರಂಭಿಸಲಾಗುವುದು ಎಂದು ಹೇಳಿದರು. ಶ್ರಮಕ್ಕಿಂತ ವೈಜ್ಞಾನಿಕವಾಗಿ ಕೃಷಿಯನ್ನು ಅಳವಡಿಸಿಕೊಂಡರೆ ಹೆಚ್ಚು ಲಾಭದಾಯಕ ಎಂದು ತಿಳಿಸಿದರು. ಐಐಎಚ್ಆರ್ ಹಾಗೂ ಶ್ರೀಶ್ರೀ ಇನ್ಸ್ಟಿಟ್ಯೂಟ್ ಆಫ್ ಅಗ್ರಿಕಲ್ಚರ್ ಸಂಸ್ಥೆಗಳ ನಡುವಿನ ಒಪ್ಪಂದಗಳಿಗೆ ಸಹಿ ಹಾಕಲಾಯಿತು.