ಬೆಂಗಳೂರು: ಆಮ್ಲಜನಕ ಸಾಂದ್ರೀಕರಣ ಸಾಧನ ಮಾರಾಟ ಮಾಡುವುದಾಗಿ ಹೇಳಿ ಕೊರೊನಾ ಸೋಂಕಿತರೊಬ್ಬರ ಮಗನಿಂದ ₹ 30 ಸಾವಿರ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ದಕ್ಷಿಣ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬನಶಂಕರಿ 3ನೇ ಹಂತದ ಕತ್ರಿಗುಪ್ಪೆ ಮುಖ್ಯ ರಸ್ತೆ ನಿವಾಸಿಯೊಬ್ಬರು ವಂಚನೆ ಸಂಬಂಧ ದೂರು ನೀಡಿದ್ದಾರೆ.
‘ದೂರುದಾರರ ತಾಯಿಗೆ ಕೊರೊನಾ ಸೋಂಕು ತಗುಲಿತ್ತು. ಆಮ್ಲಜನಕಕ್ಕಾಗಿ ಸ್ನೇಹಿತರ ಬಳಿ ವಿಚಾರಿಸಿದ್ದರು. ಅವರಿಂದ ಆರೋಪಿಯ ಮೊಬೈಲ್ ನಂಬರ್ ಸಿಕ್ಕಿತ್ತು. ಆರೋಪಿಗೆ ಕರೆ ಮಾಡಿದಾಗ, ‘ಆಮ್ಲಜನಕ ಸಾಂದ್ರೀಕರಣ ಸಾಧನವಿದೆ. ಅದಕ್ಕೆ ₹ 30,000 ಮುಂಗಡ ಹಣ ನೀಡಬೇಕು’ ಎಂದಿದ್ದ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಆರೋಪಿ ಮಾತು ನಂಬಿದ್ದ ದೂರುದಾರ ಹಣ ಪಾವತಿ ಮಾಡಿದ್ದರು. ಅದಾದ ನಂತರ ಆರೋಪಿ, ಯಾವುದೇ ಸಾಧನ ಕೊಟ್ಟಿಲ್ಲ. ಹಣವನ್ನೂ ವಾಪಸು ನೀಡದೇ ನಾಪತ್ತೆಯಾಗಿದ್ದಾನೆ’ ಎಂದೂ ತಿಳಿಸಿವೆ.