ಇಂದೋರ್: ಐದು ಮಂದಿ ಧಾರ್ಮಿಕ ಮುಖಂಡರಿಗೆ ಮಧ್ಯಪ್ರದೇಶ ಸರ್ಕಾರ ಸಚಿವರ ಸ್ಥಾನಮಾನ ನೀಡಿರುವುದನ್ನು ಅಖಿಲ ಭಾರತೀಯ ಅಖಾಡಾ ಪರಿಷತ್ (ಎಬಿಎಪಿ) ತೀವ್ರವಾಗಿ ಖಂಡಿಸಿದ್ದು, ‘ಇದೊಂದು ಬ್ಲ್ಯಾಕ್ಮೇಲ್ ತಂತ್ರ’ ಎಂದಿದೆ.
‘ಈ ಮುಖಂಡರು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಬ್ಲ್ಯಾಕ್ಮೇಲ್ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಮುಖ್ಯಮಂತ್ರಿಗಳು ಒತ್ತಡಕ್ಕೆ ಮಣಿಯಬಾರದು’ ಎಂದು ಪರಿಷತ್ ಹೇಳಿದೆ.
‘ಒಂದು ವೇಳೆ ಇವರು ಯಾವುದೇ ಧಾರ್ಮಿಕ ಸಂಘಟನೆಯ ಜೊತೆ ಸಂಪರ್ಕದಲ್ಲಿ ಇರುವುದು ಕಂಡು ಬಂದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಪರಿಷತ್ತಿನ ಅಧ್ಯಕ್ಷ ಮಹಾಂತ್ ಹೇಳಿದ್ದಾರೆ.
‘ಸಚಿವರ ಸ್ಥಾನಮಾನ ನೀಡುತ್ತೇವೆ ಎಂದಾಕ್ಷಣ ಎಲ್ಲರೂ ಸಂತೋಷದಿಂದ ಒಪ್ಪಿಕೊಂಡಿದ್ದಾರೆ. ಇದನ್ನು ಗಮನಿಸಿದರೆ ಇವರು ನಿಜವಾದ ಸಂತರಲ್ಲ, ಲೌಖಿಕ ಸುಖಕ್ಕಾಗಿ ಹಾತೊರೆಯು ವವರು ಎಂದು ಗೊತ್ತಾಗುತ್ತದೆ’ ಎಂದು ಹೇಳಿದ್ದಾರೆ.
ನರ್ಮದಾನಂದ ಮಹಾರಾಜ್, ಹರಿಹರಾನಂದ ಮಹಾರಾಜ್, ಕಂಪ್ಯೂಟರ್ ಬಾಬಾ, ಭಾಯಿ ಮಹಾರಾಜ್ ಮತ್ತು ಪಂಡಿತ್ ಯೋಗೇಂದ್ರ ಮಹಂತ್ ಅವರಿಗೆ ಸಚಿವರ ಸ್ಥಾನಮಾನ ಕಲ್ಪಿಸಲಾಗಿದೆ