ಬೆಂಗಳೂರು: ಇಲ್ಲಿನ ಪೂರ್ಣಪ್ರಜ್ಞ ವಿದ್ಯಾಪೀಠದ ಆವರಣದಲ್ಲಿನಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಗಳ ಬೃಂದಾವನ ಸಮೀಪ ಬುಧವಾರ 50ಕ್ಕೂ ಅಧಿಕ ಐಟಿ ವೃತ್ತಿಪರರು ಪಾರಾಯಣ ನಡೆಸಿದರು.
ಹೊಸ ವರ್ಷದ ಪ್ರಯುಕ್ತ ಇವರಿಗೆಲ್ಲ ರಜೆ ಇತ್ತು. ಪೇಜಾವರ ಶ್ರೀಗಳ ಮೇಲಿನ ಭಕ್ತಿ, ಗೌರವದಿಂದಾಗಿ ತಮ್ಮ ರಜೆಯನ್ನು ಪಾರಾಯಣ ಮಾಡುವುದಕ್ಕೆ ಬಳಸಿಕೊಳ್ಳಲು ಇವರು ಮುಂದಾದರು.
ಪೇಜಾವರ ಶ್ರೀಗಳು ನಿತ್ಯ ಪಠಿಸುತ್ತಿದ್ದ ವಿಷ್ಣು ಸಹಸ್ರನಾಮ, ಭಗವದ್ಗೀತೆ, ವೇದ, ವಿವಿಧ ಸ್ತೋತ್ರಗಳನ್ನು ಇವರು ಪಠಿಸಿದರು. ಜತೆಗೆ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಅಹೋರಾತ್ರಿ ಪಾರಾಯಣ ಮುಂದುವರಿದಿದೆ.
ಚಿಕ್ಕಾಲಸಂದ್ರ ರಾಘವೇಂದ್ರ ಭಜನಾ ಮಂಡಳಿಯ 150ಕ್ಕೂ ಅಧಿಕ ಮಹಿಳೆಯರು ಭಜನೆ ಮಾಡಿದರು. ಈ ಮಧ್ಯೆ, ಬೃಂದಾವನ ದರ್ಶನ ಮಾಡಲು ದೊಡ್ಡ ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದು, ಶ್ರೀಗಳನ್ನು ಸ್ಮರಿಸುತ್ತಿದ್ದಾರೆ.