ಕೆ.ಆರ್.ಪುರ: ಮಕ್ಕಳ ಶಿಕ್ಷಣಕ್ಕಾಗಿ ಕೂಡಿಟ್ಟ ಹಣವನ್ನು ಕೊರೊನಾ ಪರಿಹಾರ ಕಾರ್ಯಗಳಿಗಾಗಿ ‘ಪಿಎಂ ಕೇರ್ಸ್’ ಖಾತೆಗೆ ನೀಡಿದ್ದ ಆಂಥೋನಿ ಸ್ವಾಮಿ ಅವರ ಕಾರ್ಯವನ್ನು ಮೆಚ್ಚಿ ಹಲವರು ಅವರಿಗೆ ಹಣವನ್ನು ಕಳುಹಿಸುತ್ತಿದ್ದಾರೆ.
ಕಲ್ಪಳ್ಳಿಯ ವಿದ್ಯುತ್ ಚಿತಾಗಾರದಲ್ಲಿ ಶವ ಸುಡುವ ಕೆಲಸ ಮಾಡುವ ಆಂಥೋನಿ ಸ್ವಾಮಿ ಅವರ ಸಾಮಾಜಿಕ ಕಳಕಳಿಯ ಕುರಿತು ಕಳೆದ ಏಪ್ರಿಲ್ನಲ್ಲಿ ‘ವಿದ್ಯಾಭ್ಯಾಸದ ಹಣ ಪಿಎಂ ಕೇರ್ಸ್ಗೆ’ ಎಂಬ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟವಾಗಿತ್ತು.
ಅವರ ಮಾನವೀಯತೆಗೆ ಮೆಚ್ಚುಗೆ ವ್ಯಕ್ತಪಡಿಸಿ, ದೇಶ, ವಿದೇಶಗಳಿಂದ ಹಲವರು ಹಣ ನೀಡುತ್ತಿದ್ದಾರೆ. ಈವರೆಗೆ ₹35 ಸಾವಿರ ಸಂಗ್ರಹವಾಗಿದೆ. ಇತ್ತೀಚೆಗೆ ವಿದೇಶದಿಂದ ವ್ಯಕ್ತಿಯೊಬ್ಬರು ₹ 20,100 ಅವರ ಖಾತೆಗೆ ಕಳುಹಿಸಿದ್ದಾರೆ.
‘ಸಾರ್ವಜನಿಕರು ಕಲ್ಪಳ್ಳಿ ಸ್ಮಶಾನದ ವಿಳಾಸಕ್ಕೆ ಚೆಕ್ ಕಳುಹಿಸುತ್ತಿದ್ದಾರೆ. ಕೆಲವರು ಪತ್ರವನ್ನು ಬರೆದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರು ಕಳುಹಿಸಿದ ಹಣವನ್ನು ಮಕ್ಕಳ ಶಿಕ್ಷಣಕ್ಕೆ ಉಪಯೋಗಿಸುತ್ತೇನೆ’ ಎಂದು ಆಂಥೋನಿ ಸ್ವಾಮಿ ಹೇಳಿದರು.