ಕೆ.ಆರ್.ಪುರ: ಪವಿತ್ರ ಕಾವಿ ಧರಿಸಿ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪಿ ಶಿವಮೂರ್ತಿ ಶರಣರನ್ನು ಕಠಿಣ ಶಿಕ್ಷೆಗೆ ಒಳಪಡಿಸಲು ಆಗ್ರಹಿಸಿ ಒತ್ತಾಯಿಸಿ ಕರ್ನಾಟಕ ರಿಪಬ್ಲಿಕನ್ ಪಾರ್ಟಿ, ದಲಿತ ರಕ್ಷಣಾ ವೇದಿಕೆ ಹಾಗೂ ಹೊಯ್ಸಳ ಮಹಿಳಾ ಜನಜಾಗೃತಿ ಸಮಿತಿಯ ಕಾರ್ಯಕರ್ತರು ವೈಟ್ಫೀಲ್ಡ್ನಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಇಲ್ಲಿನ ಹೋಪ್ ಫಾರಂ ರಸ್ತೆಯಲ್ಲಿ ಸಂಚಾರ ತಡೆದು ಪ್ರತಿಭಟನೆ ನಡೆಸಿ ಸ್ವಾಮೀಜಿ ವಿರುದ್ಧ ಘೋಷಣೆ ಕೂಗಿದರು. ಕರ್ನಾಟಕ ದಲಿತ ರಕ್ಷಣಾ ವೇದಿಕೆ ಅಧಕ್ಷ ಸೋರಹುಣಸೆ ಎನ್.ವೆಂಕಟೇಶ್ ಮಾತನಾಡಿ, ‘ಮುಂದಿನ ದಿನಗಳಲ್ಲಿ ಅವರು ಯಾವುದೇ ಸಾರ್ವಜನಿಕ ಕಾರ್ಯಗಳಲ್ಲಿ ಭಾಗಿಯಾಗಬಾರದು. ಭಾಗಿಯಾದರೆ ಪ್ರತಿಭಟಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ಬೆಂಗಳೂರು ಪೂರ್ವ ತಾಲ್ಲೂಕು ವಹ್ನಿಕುಲ ಕ್ಷತ್ರಿಯ ಸಂಘದ ಅಧ್ಯಕ್ಷ ವೇಣುಗೋಪಾಲ ಮಾತನಾಡಿ, ‘ಶಿವಮೂರ್ತಿ ಶರಣರು ಮಾಡಿರುವ ಕೃತ್ಯದಿಂದ ಮಠಗಳ ಮೇಲೆ ಗೌರವ ಇಲ್ಲದಂತಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
ಡಿಪಿಐ ರಾಜಣ್ಣ, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ವೆಂಕಟರಾಜು, ಕೆ.ಆರ್.ಎಸ್. ಕಾರ್ಮಿಕ ಘಟಕ ಅಧ್ಯಕ್ಷ ಬೆಳತ್ತೂರು ವೆಂಕಟೇಶ್, ಆರ್.ಪಿ. ನಾಗೇಶ್ ಮತ್ತು ಆರುಣ್ ಕಾವೇರಪ್ಪ, ಮಹದೇವಪುರ ವರಲಕ್ಷ್ಮಿ, ಹೊಯ್ಸಳ ಜನಜಾಗೃತಿ ಸಮಿತಿ ಅಧ್ಯಕ್ಷೆ ರಮ್ಯಾ, ವಿಜಯ್ ಇದ್ದರು.