ದಾಬಸ್ ಪೇಟೆ: ನೆಲಮಂಗಲ ತಾಲ್ಲೂಕು, ತ್ಯಾಮಗೊಂಡ್ಲು ಹೋಬಳಿ, ಕಳಲುಘಟ್ಟ ಗ್ರಾಮ ಪಂಚಾಯಿತಿಗೆ ಒಳಪಡುವ ಕೋಡಿಪಾಳ್ಯ ಗ್ರಾಮದ ರಸ್ತೆ ಅದ್ವಾನವಾಗಿದ್ದು, ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹನುಮಂತಪುರದಿಂದ ಕೋಡಿಪಾಳ್ಯ ಸಂಪರ್ಕಿಸುವ 2 ಕಿ. ಮೀ ಉದ್ದದ ರಸ್ತೆಯಲ್ಲಿ ಮೊಳಕಾಲುದ್ದದ ಗುಂಡಿಗಳು ಬಿದ್ದಿವೆ. ಇದರಿಂದ, ಸಾರ್ವಜನಿಕರಿಗೆ ತೊಂದರೆಯಾಗಿ ಹಿಡಿಶಾಪ ಹಾಕುತ್ತಿದ್ದಾರೆ.
ಗುಂಡಿಗಳಲ್ಲಿ ನೀರು ನಿಂತಿದ್ದು, ರಸ್ತೆ ಯಾವುದು ಎನ್ನುವುದು ತಿಳಿಯದೆ ವಾಹನ ಸಂಚಾರರು ಬಿದ್ದು ಗಾಯಗೊಂಡಿದ್ದಾರೆ. ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಿದ್ದರೂ ಸರ್ಕಾರ ಕ್ರಮಕೈಗೊಳ್ಳುತ್ತಿಲ್ಲ ಎಂದು ಯುವಕರು ದೂರಿದ್ದಾರೆ.
ರಸ್ತೆಯಲ್ಲಿ ಗುಂಡಿ ಬಿದ್ದು ತಿಂಗಳುಗಳೇ ಕಳೆದಿವೆ. ದುರಸ್ತಿ ಮಾಡಿಸಲು ಕಳಲು ಘಟ್ಟ ಗ್ರಾಮ ಪಂಚಾಯಿತಿ ಆಡಳಿತ ಪ್ರಯತ್ನವನ್ನೇ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ರಸ್ತೆಯಲ್ಲಿ ದಿನನಿತ್ಯ ನೂರಾರು ಮಕ್ಕಳು ಶಾಲೆಗೆ, ಉದ್ಯೋಗಸ್ಥರು ಕೆಲಸಕ್ಕೆ ಹೋಗುತ್ತಾರೆ. ಅವರೆಲ್ಲ ಜೀವ ಕೈಯಲ್ಲಿ ಹಿಡಿದುಕೊಂಡು ಹೋಗಬೇಕು. ರಸ್ತೆಯಲ್ಲಿ ಬಿದ್ದ ಗುಂಡಿಯಲ್ಲಿ ನಿಂತ ನೀರಿನಿಂದ ಪಾದಚಾರಿಗಳ ಮೇಲೆ ನೀರು ಸಿಡಿದು ಬಟ್ಟೆಯೆಲ್ಲಾ ಒದ್ದೆಯಾಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.