ಬೆಂಗಳೂರು: ರಾಜ್ಯದಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಅವಕಾಶ ನೀಡಬೇಕು ಹಾಗೂ ಸರ್ಕಾರದಿಂದ ಉದ್ಯಮಕ್ಕೆ ನೆರವು ನೀಡುವಂತೆ ಕೋರಿ ಕರ್ನಾಟಕ ಟೂರಿಸಂ ಸೊಸೈಟಿ ಹಾಗೂ ದಕ್ಷಿಣ ಭಾರತ ಹೋಟೆಲ್ ಮತ್ತು ರೆಸ್ಟೋರೆಂಟ್ಗಳ ಸಂಘದ ವತಿಯಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.
ಅಂತರ ಕಾಯ್ದುಕೊಳ್ಳುವುದೂ ಸೇರಿ ಸರ್ಕಾರದ ನಿಯಮಗಳನುಸಾರ ಹೋಟೆಲ್ ಹಾಗೂ ರೆಸ್ಟೋರೆಂಟ್ಗಳಲ್ಲಿ ಆಹಾರ ಸೇವನೆಗೆ ಅನುಮತಿ ನೀಡಬೇಕು. ಹೋಟೆಲ್ ಮತ್ತು ರೆಸ್ಟೋರೆಂಟ್ಗಳ ಕಾರ್ಯಾರಂಭಕ್ಕೆ ಅವಕಾಶ ನೀಡಬೇಕು ಹಾಗೂ ಇಲ್ಲಿ ಕೆಲಸ ಮಾಡುವ ಅನ್ಯ ರಾಜ್ಯಗಳ ಕೆಲಸಗಾರರಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ಈ ವರ್ಷದ ಆಸ್ತಿ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಬೇಕು ಎಂದು ಮನವಿ ಮಾಡಿದರು.
ಮಾರ್ಚ್ನಿಂದ ಜುಲೈವರೆಗಿನ ವಿದ್ಯುತ್ ಬಿಲ್ಗಳ ಮೇಲಿನ ಶುಲ್ಕ ಮನ್ನಾ ಅಥವಾ ವಿನಾಯಿತಿ ಕೊಡಬೇಕು, ಆರು ತಿಂಗಳವರೆಗೆ ಸರಕು ಮತ್ತು ಸೇವೆ ವಾಹನಗಳ ರಸ್ತೆ ತೆರಿಗೆ ವಿನಾಯಿತಿ ನೀಡಬೇಕು. ಆಟೊ, ಕ್ಯಾಬ್ ಚಾಲಕರಿಗೆ ನೀಡಿರುವಂತೆ ಪ್ರವಾಸಿ ಬಸ್ಗಳು ಹಾಗೂ ಮ್ಯಾಕ್ಸಿ ಕ್ಯಾಬ್ ಚಾಲಕರಿಗೂ ಐದು ಸಾವಿರ ಗೌರವಧನ ನೀಡಬೇಕು. ಪ್ರವಾಸೋದ್ಯಮದಡಿ ಪಿಎಫ್, ಇಎಸ್ಐ ಸೌಲಭ್ಯಗಳಿಲ್ಲದ ಅಸಂಘಟಿತ ನೌಕರರಿಗೆ ವೇತನ ಹಾಗೂ ವೈದ್ಯಕೀಯ ಭದ್ರತೆ ನೀಡಬೇಕು ಎಂದು ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.