ಬೆಂಗಳೂರು: ಪಿಇಎಸ್ ವಿಶ್ವವಿದ್ಯಾಲಯದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರೊ. ಸಿ.ಎನ್.ಆರ್. ರಾವ್ ಮತ್ತು ಪ್ರೊ. ಎಂ.ಆರ್.ಡಿ. ವಿದ್ಯಾರ್ಥಿವೇತನ ವಿತರಿಸಲಾಯಿತು.
ಅಕ್ಸೆಂಚರ್ ಕಂಪನಿಯ ಸುಧಾರಿತ ತಂತ್ರಜ್ಞಾನ ಕೇಂದ್ರಗಳ ಹಿರಿಯ ವ್ಯವಸ್ಥಾಪಕ ನಿರ್ದೇಶಕ ಮೋಹನ್ ಶೇಖರ್, ‘ಈಗಿನ ತಂತ್ರಜ್ಞಾನ ಯುಗದಲ್ಲಿ ಹೊಸ ಆವಿಷ್ಕಾರಗಳು ಮಹತ್ವ ಪಡೆಯುತ್ತಿವೆ. ಹೊಸತನವನ್ನು ಒಪ್ಪಿಕೊಂಡು ಅಳವಡಿಸಿಕೊಳ್ಳುವ ಸಂಸ್ಥೆಗಳು ಮಾತ್ರ ಬದುಕುಳಿದು ಬೆಳವಣಿಗೆ ಸಾಧಿಸಲು ಸಾಧ್ಯ’ ಎಂದರು.
ಮೋಹನ್ ಶೇಖರ್ ಮತ್ತು ಸಿಸ್ಕೊ ಕಂಪನಿಯ ಭಾರತ ಮತ್ತು ಸಾರ್ಕ್ ದೇಶಗಳ ಅಧ್ಯಕ್ಷ ಸಮೀರ್ ಗಾರಡೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು.
2019ರ ಆಗಸ್ಟ್–ಡಿಸೆಂಬರ್ ಸೆಮಿಸ್ಟರ್ನ 195 ವಿದ್ಯಾರ್ಥಿಗಳಿಗೆ, ₹58.28 ಲಕ್ಷ ಮೊತ್ತದ ಪ್ರೊ.ಸಿ.ಎನ್.ಆರ್. ರಾವ್ ವಿದ್ಯಾರ್ಥಿ ವೇತನ ಮತ್ತು 1,457 ವಿದ್ಯಾರ್ಥಿಗಳಿಗೆ ₹4.68 ಕೋಟಿ ಮೊತ್ತದ ಪ್ರೊ. ಎಂ.ಆರ್.ಡಿ. ವಿದ್ಯಾರ್ಥಿ ವೇತನ ವಿತರಿಸಲಾಯಿತು.