ಸೋಮವಾರಪೇಟೆ: ಸಮೀಪದ ಕರ್ಕಳ್ಳಿ ಗ್ರಾಮದಲ್ಲಿ ಸೋಮವಾರ ರಾತ್ರಿ ಭಾರಿ ಗಾಳಿ-ಮಳೆಗೆ ಮನೆಗಳ ಹೆಂಚು ಹಾಗೂ ಚಾವಣಿ ಹಾರಿ ಹೋಗಿ ಹಲವು ಕುಟುಂಬಗಳು ಪರದಾಡಿದವು.ಮನೆಯೊಳಗಿದ್ದವರು ಪ್ರಾಣಾ ಪಾಯದಿಂದ ಪಾರಾಗಿದ್ದಾರೆ. ಕರ್ಕಳ್ಳಿ ನಗರೂರು ಗ್ರಾಮದ ಕೂಲಿ ಕಾರ್ಮಿಕರಾದ ಸುಂದರ ಅವರ ಮನೆಯಲ್ಲಿ ಸಾರಮ್ಮ ಎಂಬವರು ಅಡುಗೆ ಮಾಡುತ್ತಿದ್ದಾಗ ಚಾವಣಿ ಹಾರಿ ಹೋಗಿ ಸಂಪೂರ್ಣ ಹಾನಿಯಾಗಿದೆ. ಅವರು ರಾತ್ರಿಯಿಡಿ ಪಕ್ಕದ ಮನೆಯನ್ನು ಆಶ್ರಯಿಸಬೇಕಾಯಿತು.ಸಮೀಪದಲ್ಲಿದ್ದ ಮಂಜುಳಾ ಎಂಬವರ ಮನೆಯ ಶೀಟುಗಳು ಭಾಗಶಃ ಹಾನಿಗೀಡಾಗಿದ್ದು ಮನೆಯೊಳಗೆ ಆಡುತ್ತಿದ್ದ ಮಗು ಅಪಾಯದಿಂದ ಪಾರಾಗಿದೆ. ವಸ್ತುಗಳೆಲ್ಲ ನೀರಿನಲ್ಲಿ ಹಾಳಾಗಿವೆ.ಮಂಗಳವಾರ ಸ್ಥಳಕ್ಕೆ ಬೇಳೂರು ಪಂಚಾಯಿತಿ ಸದಸ್ಯರಾದ ಯೋಗೇಂದ್ರ, ಸುಭದ್ರಾಕುಮಾರಿ, ವೀಣಾ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಂಪೂರ್ಣ ಮನೆ ಹಾನಿಗೀಡಾಗಿರುವ ಸುಂದರ್ ಸೇರಿದಂತೆ 3 ಮಂದಿಗೆ ₹ 15 ಸಾವಿರ ಹಣ ನೀಡಿದರು.ಗ್ರಾಮ ಲೆಕ್ಕಾಧಿಕಾರಿ ಮೋಹನ್ ಸ್ಥಳಕ್ಕೆ ಬಂದು ಮಹಜರು ನಡೆಸಿದರು. ಗ್ರಾಮದ ಪ್ರಮುಖ ಎಂ.ವೆಂಕಪ್ಪ ಇದ್ದರು.