ಬೆಂಗಳೂರು: ಕೊರೊನಾ ಸೋಂಕು ಹರಡುವಿಕೆ ತಡೆಗಾಗಿ ನಗರದಲ್ಲಿ ಏಪ್ರಿಲ್ 10ರಿಂದ 20ರವರೆಗೆ ಪ್ರತಿದಿನದ ರಾತ್ರಿ 10 ಗಂಟೆಯಿಂದ ಮರುದಿನ ನಸುಕಿನ 5 ಗಂಟೆಯವರೆಗೂ ಕರ್ಫ್ಯೂ ಜಾರಿ ಮಾಡಲಾಗಿದ್ದು, ಆ ಸಮಯದಲ್ಲಿ ಯಾರಾದರೂ ಅನವಶ್ಯಕವಾಗಿ ಓಡಾಡಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಕಮಿಷನರ್ ಕಮಲ್ ಪಂತ್ ಎಚ್ಚರಿಸಿದ್ದಾರೆ.
ಕರ್ಫ್ಯೂ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ರಾತ್ರಿಯೀಡಿ ಪೊಲೀಸರು ನಗರದಲ್ಲಿ ಗಸ್ತು ತಿರುಗಲಿದ್ದಾರೆ. ಪ್ರತಿಯೊಂದು ಸ್ಥಳಗಳ ಮೇಲೂ ಕಣ್ಣಿಡಲಿದ್ದಾರೆ. ತಪ್ಪಿತಸ್ಥರು ಯಾರೇ ಇದ್ದರೂ ಕ್ರಮ ಕೈಗೊಳ್ಳಲಿದ್ದಾರೆ’ ಎಂದರು.
‘ರಾತ್ರಿ ಪಾಳಿ ಕೆಲಸಕ್ಕೆ ಹೋಗುವವರು 10 ಗಂಟೆಯೊಳಗೆ ಹೋಗಬೇಕು. ಉಳಿದವರು ರಾತ್ರಿ 10 ಗಂಟೆಯೊಳಗೆ ಮನೆ ಸೇರಬೇಕು. ಅದಾದ ನಂತರ, ಸಾರ್ವಜನಿಕ ಸ್ಥಳಗಳಲ್ಲಿ ಗುಂಪು ಸೇರಿ ಓಡಾಡಬಾರದು. ಅನಗತ್ಯವಾಗಿ ಮನೆಯಿಂದ ಹೊರಬರಬಾರದು’ ಎಂದರು.
‘ಪಬ್, ಬಾರ್, ರೆಸ್ಟೋರೆಂಟ್, ಹೋಟೆಲ್ ಹಾಗೂ ಇತರೆ ವಾಣಿಜ್ಯ ಮಳಿಗೆಗಳನ್ನೂ ಬಂದ್ ಮಾಡಬೇಕು. ಬೇರೆ ಊರಿನಿಂದ ನಗರಕ್ಕೆ ರಾತ್ರಿ ಬರುವ ಹಾಗೂ ಹೋಗುವವರ ಸಂಚಾರಕ್ಕೆ ಯಾವುದೇ ಅಡ್ಡಿ ಇರುವುದಿಲ್ಲ. ಆದರೆ, ಸಿಬ್ಬಂದಿಗೆ ಟಿಕೆಟ್ ತೋರಿಸಬೇಕು’ ಎಂದೂ ಹೇಳಿದರು.
‘ಆಹಾರ ಡೆಲಿವರಿಗೆ ಯಾವುದೇ ಅಡ್ಡಿ ಇಲ್ಲ. ಆಸ್ಪತ್ರೆ, ಔಷಧಿ ಅಂಗಡಿ ಸೇರಿದಂತೆ ತುರ್ತು ಸೇವೆಗೆ ಹೋಗುವವರು ತಮ್ಮ ಗುರುತಿನ ಚೀಟಿಗಳನ್ನು ಪೊಲೀಸರಿಗೆ ತೋರಿಸಿ ಹೋಗಬಹುದು’ ಎಂದರು.