ಬೆಂಗಳೂರು: ಶ್ರೀರಾಂಪುರ ಪೊಲೀಸರು ಶನಿವಾರ ರಾತ್ರಿ ರೌಡಿಶೀಟರ್ಗಳ ಮನೆಗಳ ಮೇಲೆ ದಿಢೀರ್ ದಾಳಿ ನಡೆಸಿ, ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿದ್ದಾರೆ.
ಇನ್ಸ್ಪೆಕ್ಟರ್ ಸುನೀಲ್ ನಾಯಕ್ ನೇತೃತ್ವದಲ್ಲಿ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ, ರೌಡಿಶೀಟರ್ಗಳ ಆಧಾರ್ ಕಾರ್ಡ್ ಮತ್ತಿತರ ಗುರುತಿನ ಚೀಟಿಗಳನ್ನು ಪರಿಶೀಲಿಸಿದ್ದಾರೆ.
ಗಣೇಶ್ ತಂಬಿ, ಲೋಗನಾಥ್ ಸೇರಿದಂತೆ ಪ್ರಮುಖ ರೌಡಿಶೀಟರ್ಗಳು ಮತ್ತು ಕಾನೂನುಬಾಹಿರ ಚಟುವಟಿಕೆಯಲ್ಲಿ ನಿರಂತರವಾಗಿ ಭಾಗಿಯಾಗುತ್ತಿದ್ದವರನ್ನು ಠಾಣೆಗೆ ಕರೆದುಕೊಂಡು ಬಂದು ಎಚ್ಚರಿಕೆ ನೀಡಿದ್ದಾರೆ. ರೌಡಿಗಳ ಮನೆಗಳಿಗೆ ತೆರಳಿ, ಮಕ್ಕಳ ಬಗ್ಗೆ ನಿಗಾ ವಹಿಸುವಂತೆ ಪೋಷಕರಿಗೆ ಸೂಚಿಸಿದ್ದಾರೆ.
‘ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವವರು ಕಡ್ಡಾಯವಾಗಿ ಠಾಣೆಗೆ ಬಂದು ಹೋಗಬೇಕು. ಅಪರಾಧ ಪ್ರಕರಣಗಳಲ್ಲಿ ಪದೇ ಪದೇ ಹೆಸರುಗಳು ಕೇಳಿಬಂದರೆ, ಮುಂದಿನ ಅನಾಹುತಗಳಿಗೆ ನೀವೇ ಕಾರಣರಾಗಿರುತ್ತೀರಿ’ ಎಂದೂ ಹೇಳಿದ್ದಾರೆ.
‘ರಸ್ತೆ ಬದಿಯಲ್ಲಿ ನಿಂತು ಬೆದರಿಸಿ ದರೋಡೆ, ಮೊಬೈಲ್ ಕಳವು, ತಮ್ಮ ಪ್ರದೇಶಗಳಲ್ಲಿ ಪ್ರಾಬಲ್ಯ ಸಾಧಿಸಲು ಯತ್ನಿಸುವುದು ಮತ್ತಿತರ ಕೃತ್ಯಗಳಲ್ಲಿ ಭಾಗಿಯಾದರೆ ಬಂಧಿಸಿ ಜೈಲಿಗೆ ಕಳುಹಿಸಲಾಗುವುದು’ ಎಂದೂ ಎಚ್ಚರಿಕೆ ನೀಡಿದ್ದಾರೆ.