ಬೆಂಗಳೂರು: ‘ಮಾಲಿನ್ಯ ಮುಕ್ತ ವಿದ್ಯುತ್ ಉತ್ಪಾದನೆ ಪ್ರಮಾಣವನ್ನು 2030ರ ವೇಳೆಗೆ ಶೇ 40ಕ್ಕೆ ಹೆಚ್ಚಿಸುವ ಗುರಿ ಇದೆ’ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಹರ್ಷವರ್ಧನ ತಿಳಿಸಿದರು.
ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಅಂತರಶಾಸ್ತ್ರೀಯ ಶಕ್ತಿ ಸಂಶೋಧನಾ ಕೇಂದ್ರವನ್ನು (ಐಸಿಇಆರ್) ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಪರಿಸರ ಸ್ನೇಹಿ ಇಂಧನ ಉತ್ಪಾದನೆ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಸಾಕಷ್ಟು ಶ್ರಮ ವಹಿಸುತ್ತಿದೆ. 2018ರ ವೇಳೆಗೆ ಶೇ 30ರಷ್ಟು ಗುರಿ ತಲುಪಿದ್ದೇವೆ. ಪವನಶಕ್ತಿ, ಸೌರಶಕ್ತಿ ಹಾಗೂ ಇನ್ನಿತರೆ ಮೂಲಗಳಿಂದ ಒಟ್ಟಾರೆ 100 ಗಿಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ’ ಎಂದರು.
ಇತಿಹಾಸ ತಿರುಚಿಲ್ಲ: ‘ಸ್ವಾಮಿ ವಿವೇಕಾನಂದರ ಪ್ರೇರಣೆಯಿಂದ ಐಐಎಸ್ಸಿ ಸ್ಥಾಪನೆಯಾಗಿದೆ. ಇಲ್ಲಿಗೆ ಭೇಟಿ ನೀಡಿದಾಗಲೆಲ್ಲಾ, ಈ ಬಗ್ಗೆ ಕೇಳುತ್ತಿದ್ದೇನೆ. ಇತ್ತೀಚೆಗೆ ಇತಿಹಾಸ ತಿರುಚುವ ಕೆಲಸ ನಡೆಯುತ್ತಿದ್ದರೂ, ಐಐಎಸ್ಸಿಯಲ್ಲಿ ಆ ಪ್ರಯತ್ನ ನಡೆದಿಲ್ಲ’ ಎಂದು ಹರ್ಷವರ್ಧನ ಹಾಸ್ಯ ಚಟಾಕಿ ಹಾರಿಸಿದರು.