ಬೆಂಗಳೂರು: ‘ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳ ನೇರವೇತನ ಪೌರಕಾರ್ಮಿಕರನ್ನು ಕೂಡಲೇ ಕಾಯಂ ಮಾಡಬೇಕು’ ಎಂದುರಾಜ್ಯ ನಗರ ಪಾಲಿಕೆ, ನಗರ ಸಭೆ, ಪುರಸಭೆಗಳ ಪೌರಕಾರ್ಮಿಕರ ಮಹಾಸಂಘದ ಅಧ್ಯಕ್ಷ ನಾರಾಯಣ ಒತ್ತಾಯಿಸಿದರು.
ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,‘ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ನೇರ ವೇತನ ಪೌರಕಾರ್ಮಿಕರು, ಮೇಲ್ವಿಚಾರಕರು (ಮೇಸ್ತ್ರಿ), ಆಟೊ ಚಾಲಕರು ಹಾಗೂ ಸಹಾಯಕರನ್ನು ಒಂದು ತಿಂಗಳಲ್ಲಿ ಕಾಯಂ ಮಾಡಬೇಕು’ ಎಂದರು.
‘60 ವರ್ಷ ತುಂಬಿದ ನೇರವೇತನ ಪೌರಕಾರ್ಮಿಕರಿಗೆ ನಿವೃತ್ತಿ ಸವಲತ್ತುಗಳನ್ನು ಒದಗಿಸಬೇಕು. ಪೌರಕಾರ್ಮಿಕರನ್ನು ಕಾಯಂ ಮಾಡುವ ಸಂಬಂಧ ಸಚಿವ ಸಂಪುಟದಲ್ಲಿ ತೆಗೆದುಕೊಂಡಿರುವ ನಿರ್ಣಯ ಈವರೆಗೆ ಜಾರಿಯಾಗಿಲ್ಲ.ಗಡುವಿನೊಳಗೆ ಬೇಡಿಕೆಗಳು ಈಡೇರದಿದ್ದರೆ ರಾಜ್ಯದಾದ್ಯಂತ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಾಗುವುದು’ ಎಂದೂ ಎಚ್ಚರಿಸಿದರು.