ಬೆಂಗಳೂರು: ನಗರದಲ್ಲಿ ಶುಕ್ರವಾರ ಮಧ್ಯಾಹ್ನ ಮಳೆ ಸುರಿಯುತ್ತಿದ್ದಂತೆ ಹಲವು ಕಡೆ ವಿದ್ಯುತ್ ಕಡಿತಗೊಳಿಸಲಾಯಿತು. ತಾಸಿನ ನಂತರ ವಿದ್ಯುತ್ ನೀಡಲಾಯಿತಾದರೂ, ನಂತರ ನಿಯಮಿತವಾಗಿ ಕಡಿತಗೊಳಿಸಲಾಗುತ್ತಿತ್ತು.
ನಗರದ ಉತ್ತರ ಭಾಗದ ಹಲವು ಪ್ರದೇಶಗಳಲ್ಲಿ ಶುಕ್ರವಾರ ಮಧ್ಯಾಹ್ನದಿಂದ ರಾತ್ರಿಯವರೆಗೆ ವಿದ್ಯುತ್ ಇರಲಿಲ್ಲ.
‘ನಗರದಲ್ಲಿ ಮಳೆ ಪ್ರಾರಂಭವಾಗಿ ಐದು ನಿಮಿಷವೂ ಆಗಿರುವುದಿಲ್ಲ. ಆಗಲೇ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ಮರಗಳು, ವಿದ್ಯುತ್ ಕಂಬ ಬಿದ್ದಿರದಿದ್ದರೂ ಸುಮ್ಮನೆ ಕರೆಂಟ್ ತೆಗೆಯುತ್ತಾರೆ’ ಎಂದು ಮತ್ತಿಕೆರೆಯ ರಮೇಶ್ ದೂರುತ್ತಾರೆ.
ಮಲ್ಲೇಶ್ವರ, ಅನ್ನಪೂರ್ಣೇಶ್ವರಿ ನಗರ, ನಾಗರಬಾವಿ ಎರಡನೇ ಹಂತ, ಚನ್ನಸಂದ್ರ, ಬ್ಯಾಟರಾಯನಪುರ, ಸುಂಕದಕಟ್ಟೆ, ಕಾಮಾಕ್ಷಿಪಾಳ್ಯ, ಎಚ್.ಎಸ್.ಆರ್. ಲೇಔಟ್, ಲಾಲ್ಬಾಗ್, ಸಿದ್ದಾಪುರ, ಜಯನಗರ, ಚಂದ್ರಾಲೇಔಟ್, ಗೋವಿಂದರಾಜನಗರ, ಬಸವೇಶ್ವರನಗರ ಸೇರಿದಂತೆ ಹಲವು ಭಾಗಗಳಲ್ಲಿ ವಿದ್ಯುತ್ ಕಡಿತಗೊಳಿಸಲಾಗಿತ್ತು.
‘ವಿದ್ಯುತ್ ವ್ಯತ್ಯಯವಾದರೆ ಬೆಸ್ಕಾಂ ಸಹಾಯವಾಣಿಗೆ ಕರೆ ಮಾಡಿ ಎಂದು ಹೇಳುತ್ತಾರೆ. 1912ಗೆ ಕರೆ ಮಾಡಿದರೆ ಯಾರೂ ಸ್ವೀಕರಿಸುವುದಿಲ್ಲ’ ಎಂದು ಬಸವೇಶ್ವರನಗರದ ಮಹಾಂತೇಶ್ ದೂರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.