ಬೊಮ್ಮನಹಳ್ಳಿ: ‘ಜವಾಬ್ದಾರಿಯುತ ಸರ್ಕಾರವು ಕೋವಿಡ್ ಮೂರನೇ ಅಲೆಯನ್ನು ತಡೆಯುವುದಕ್ಕೆ ಈಗಾಗಲೇ ಸಿದ್ಧತೆ ನಡೆಸಬೇಕಿತ್ತು. ಇದಕ್ಕೆ ತದ್ವಿರುದ್ದವಾಗಿ ಬಿಜೆಪಿ ಮುಖಂಡರು ಒಳಜಗಳದಲ್ಲಿ ತೊಡಗಿದ್ದಾರೆ. ಅವರಿಗೆ ಬಡ ಜನರ ಕುರಿತ ಕಾಳಜಿಗಿಂತ ಅಧಿಕಾರವೇ ಮುಖ್ಯವಾಗಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಬೇಸರ ವ್ಯಕ್ತಪಡಿಸಿದರು.
ಕೋವಿಡ್ ಸಂತ್ರಸ್ತರಿಗೆ ದಿನಸಿ ಕಿಟ್ ನೀಡುವ ಉದ್ದೇಶದಿಂದ ಬನ್ನೇರುಘಟ್ಟ ರಸ್ತೆ, ಅರಕೆರೆಯಲ್ಲಿ ಸ್ಥಳೀಯ ಕಾಂಗ್ರೆಸ್ ಘಟಕವು ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಹಲವು ಅಂತರರಾಷ್ಟ್ರೀಯ ಮಾಧ್ಯಮಗಳು ದೇಶದಲ್ಲಿ ಕೊರೊನಾ ದಿಂದ ಸತ್ತವರ ಸಂಖ್ಯೆ ಕುರಿತು ಸಂಶಯ ವ್ಯಕ್ತಪಡಿಸಿವೆ. ಇದಕ್ಕೆ ಪುಷ್ಟಿ ನೀಡುವಂತೆ ಸ್ಮಶಾನಗಳಲ್ಲಿ ಮೃತದೇಹ ಸುಡಲು ಜನ ದಿನಗಟ್ಟಲೇ ಸರತಿ ಸಾಲಿನಲ್ಲಿ ನಿಂತಿದ್ದ ದೃಶ್ಯಗಳನ್ನು ಮಾಧ್ಯಮಗಳು ವರದಿ ಮಾಡಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಖ ಉಳಿಸಿಕೊಳ್ಳಲು ಸುಳ್ಳು ಲೆಕ್ಕ ನೀಡುತ್ತಿವೆ’ ಎಂದು ಆರೋಪಿಸಿದರು.
ಸ್ಥಳೀಯ ಕಾಂಗ್ರೆಸ್ ಮುಖಂಡ ಗೋಪಾಲರೆಡ್ಡಿ, ‘ಈ ಭಾಗದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ 8 ಸಾವಿರ ಕುಟುಂಬಗಳಿಗೆ ದಿನಸಿ ಸಾಮಗ್ರಿ ನೀಡುತ್ತಿದ್ದೇವೆ. ಪ್ರತಿದಿನ 2 ಸಾವಿರ ಜನರಿಗೆ ಸಿದ್ಧ ಆಹಾರವನ್ನು ಪೂರೈಸುತ್ತಿದ್ದೇವೆ’ ಎಂದರು.
ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೃಷ್ಣಪ್ಪ, ಪಕ್ಷದ ಮುಖಂಡ ಆರ್.ಕೆ.ರಮೇಶ್ ಇದ್ದರು.