ಬೆಂಗಳೂರು: ಚೆಕ್ಬೌನ್ಸ್ ಪ್ರಕರಣ ಸಂಬಂಧ ಉದ್ಯಮಿ ಆರ್. ಪ್ರಭಾಕರ್ ರೆಡ್ಡಿ ಹಾಗೂ ಅವರ ಪತ್ನಿ ದೀಪಾ ಅವರನ್ನು ಕೋರಮಂಗಲ ಠಾಣೆ ಪೊಲೀಸರು ಸೋಮವಾರ ಸಂಜೆ ಬಂಧಿಸಿದ್ದಾರೆ.
‘ಮಂಗಳೂರಿನ ಉದ್ಯಮಿಯೊಬ್ಬರು ಪ್ರಭಾಕರ್ ರೆಡ್ಡಿ ದಂಪತಿ ವಿರುದ್ಧ ಚೆಕ್ಬೌನ್ಸ್ ಮೊಕದ್ದಮೆ ಹೂಡಿದ್ದರು. ಮಂಗಳೂರಿನ ನ್ಯಾಯಾಲಯದಲ್ಲಿ ಮೊಕದ್ದಮೆ ವಿಚಾರಣೆಗೆ ದಂಪತಿ ಗೈರಾಗಿದ್ದರು. ಹೀಗಾಗಿ, ಅವರಿಬ್ಬರ ಬಂಧನಕ್ಕೆ ನ್ಯಾಯಾಲಯ ವಾರಂಟ್ ಜಾರಿ ಮಾಡಿತ್ತು’ ಎಂದು ಕೋರಮಂಗಲ ಪೊಲೀಸರು ಹೇಳಿದರು.
‘ವಾರಂಟ್ ಸಮೇತ ಬೇಗೂರಿನಲ್ಲಿರುವ ಮನೆಗೆ ಹೋಗಿ ಪ್ರಭಾಕರ್ ರೆಡ್ಡಿ ದಂಪತಿಯನ್ನು ಬಂಧಿಸಲಾಗಿದೆ. ಅವರಿಬ್ಬರನ್ನು ಮಂಗಳೂರಿನ ನ್ಯಾಯಾಲಯಕ್ಕೆ ಮಂಗಳವಾರ ಹಾಜರುಪಡಿಸಲಾಗುವುದು’ ಎಂದರು.