ಬೆಂಗಳೂರು: ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಪತ್ರಿಕಾ ಬಳಗದಿಂದ ‘ದೀಕ್ಷಾ’ ಸಹಯೋಗದಲ್ಲಿ 6ನೇ ಆವೃತ್ತಿಯ ‘ಪ್ರಜಾವಾಣಿ ಕ್ವಿಜ್ ಚಾಂಪಿಯನ್ಷಿಪ್’ನ ಬೆಂಗಳೂರು ವಲಯ ಹಾಗೂ ಅಂತಿಮ ಸುತ್ತಿನ ಸ್ಪರ್ಧೆಗಳು ಇದೇ 30ರಂದು ಸೆಂಟ್ರಲ್ ಕಾಲೇಜು ಆವರಣದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆಯಲಿವೆ.
ಅಂದು ಬೆಳಿಗ್ಗೆ8.30ರಿಂದ ನೋಂದಣಿ ಆರಂಭವಾಗುತ್ತದೆ. ಬೆಳಿಗ್ಗೆ ಬೆಂಗಳೂರು ವಲಯದ ಕ್ವಿಜ್ ಚಾಂಪಿಯನ್ಷಿಪ್ ನಡೆಯಲಿದೆ. ಬೆಂಗಳೂರು ಸಂಚಾರ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಡಾ.ಬಿ.ಆರ್.ರವಿಕಾಂತೇಗೌಡ ಪ್ರಶಸ್ತಿ ಪ್ರದಾನ ಮಾಡುವರು.ಮಧ್ಯಾಹ್ನದ ನಂತರ ಅಂತಿಮ ಸುತ್ತಿನ ಕ್ವಿಜ್ ಚಾಂಪಿಯನ್ಷಿಪ್ ನಡೆಯಲಿದೆ. ರಾಜ್ಯದ ಇತರ 11 ಕಡೆಗಳಲ್ಲಿ ವಿಜೇತರಾದ ತಲಾ ಇಬ್ಬರ ತಂಡದೊಂದಿಗೆ ಬೆಂಗಳೂರು ವಲಯದಿಂದ ವಿಜೇತರಾದ ಇಬ್ಬರು ಸ್ಪರ್ಧಿಸಲಿದ್ದು, ಒಟ್ಟು 12 ತಂಡಗಳ 24 ಮಂದಿ ಅಂತಿಮ ಹಣಾಹಣಿಯಲ್ಲಿ ಪ್ರಶಸ್ತಿಗಾಗಿ ಸೆಣಸಲಿದ್ದಾರೆ.
ಈಗಾಗಲೇ ಮೈಸೂರು, ಹಾಸನ, ಉಡುಪಿ, ಮಡಿಕೇರಿ, ಮಂಗಳೂರು, ದಾವಣಗೆರೆ ಹಾಗೂ ಧಾರವಾಡದಲ್ಲಿ ಕ್ವಿಜ್ ನಡೆದಿದ್ದು,ಜಮಖಂಡಿ, ಕಲಬುರ್ಗಿ, ರಾಯಚೂರು ಹಾಗೂ ತುಮಕೂರಿನಲ್ಲಿ ಸ್ಪರ್ಧೆಗಳು ನಡೆಯಲಿವೆ.
ವಿಜೇತ ತಂಡಕ್ಕೆ ₹ 50 ಸಾವಿರ ನಗದು ಬಹುಮಾನ ಇದೆ. 2ನೇ ಬಹುಮಾನ ₹ 30 ಸಾವಿರ, 3ನೇ ಬಹುಮಾನ ₹ 10 ಸಾವಿರ, 4ನೇ ಬಹುಮಾನ ₹ 6 ಸಾವಿರ, 5ನೇ ಬಹುಮಾನ ₹ 4 ಸಾವಿರ ಇದೆ.
10ನೇ ತರಗತಿವರೆಗಿನ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು. ಬೆಂಗಳೂರು ನಗರ ವ್ಯಾಪ್ತಿಯ ಶಾಲೆಗಳು ಸ್ಪರ್ಧೆಯ ಬಗ್ಗೆ ಮಾಹಿತಿಗೆ 9606912242, 9742284543 ಸಂಪರ್ಕಿಸಬಹುದು.