ಬೆಂಗಳೂರು: ‘ಮರ ಆಧಾರಿತ ಕೃಷಿಗೆ ಉತ್ತೇಜಿಸುವ ಸಲುವಾಗಿಜಗ್ಗಿ ವಾಸುದೇವ್ (ಸದ್ಗುರು) ನೇತೃತ್ವದ ಈಶ ಪ್ರತಿಷ್ಠಾನ ಆರಂಭಿಸಿರುವ ‘ಗ್ರಾಮ ಸಂಪರ್ಕ ಅಭಿಯಾನ’ಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ’ ಎಂದು ಪ್ರತಿಷ್ಠಾನದ ಸ್ವಯಂಸೇವಕ ಸ್ವಾಮಿ ತವಿಸಾ ತಿಳಿಸಿದರು.
ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಭಿಯಾನವುಆಗಸ್ಟ್2ರಿಂದ ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು,ಚಾಮರಾಜನಗರ,ಹಾಸನ,ಕೊಡಗು,ಮೈಸೂರು,ಮಂಡ್ಯ,ರಾಮನಗರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಆರಂಭಗೊಂಡಿದ್ದು, 24 ತಾಲ್ಲೂಕುಗಳಲ್ಲಿ189ಕಾರ್ಯಕ್ರಮಗಳು ನಡೆದಿವೆ’ ಎಂದು ವಿವರಿಸಿದರು.
‘ಗ್ರಾಮ ಪಂಚಾಯಿತಿಗಳಲ್ಲಿ ಈ ಅಭಿಯಾನವನ್ನು ಸ್ವಯಂಸೇವಕರಾದ ‘ಮರ ಮಿತ್ರ’ರ ಮೂಲಕ ನಡೆಸಲಾಗುತ್ತಿದೆ. ಮರ ಆಧಾರಿತ ಕೃಷಿಯನ್ನು ಅಳವಡಿಸಿಕೊಳ್ಳಲು ಮತ್ತು ರೈತ ಸಮುದಾಯವನ್ನು ಬೆಂಬಲಿಸಲು ಸಮುದಾಯದ ಅನೇಕರನ್ನು ಇವರು ಒಗ್ಗೂಡಿಸಿದ್ದಾರೆ’ ಎಂದರು.
‘ಅಭಿಯಾನಕ್ಕಾಗಿ ‘ಸ್ಟೇಟ್ ಆಫ್ ದಿ ಆರ್ಟ್’ ಎಂಬ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಲಾಗಿದ್ದು, ಇದರಲ್ಲಿ ಹೆಸರು ನೋಂದಾಯಿಸಿಕೊಳ್ಳುವ ರೈತರ ಮನೆ ಬಾಗಿಲಿಗೆ ‘ಮರ ಮಿತ್ರ’ರು ಸಸಿಗಳನ್ನು ತಲುಪಿಸುತ್ತಿದ್ದಾರೆ. ಅರಣ್ಯ, ರೇಷ್ಮೆ, ತೋಟಗಾರಿಕೆ, ಗ್ರಾಮೀಣ ಮತ್ತು ಪಂಚಾಯತ್ ರಾಜ್ ಇಲಾಖೆಗಳ ಸಹಯೋಗದಲ್ಲಿ ನಡೆಯುತ್ತಿರುವ ಈ ಅಭಿಯಾನ ಮುಂದಿನ ವಾರಗಳಲ್ಲಿ ಬೇರೆ ಜಿಲ್ಲೆಗಳಲ್ಲೂ ಮುಂದುವರಿಯಲಿದೆ’ ಎಂದು ಹೇಳಿದರು.