ಬೆಂಗಳೂರು: ಪೆರೋಲ್ ಮೇಲೆ ಜೈಲಿನಿಂದ ಹೊರಹೋಗಿ ವಾಪಸು ಬರದೇ ತಲೆಮರೆಸಿಕೊಂಡಿದ್ದ ಕೈದಿ ಹರೀಶ್ ಕುಲಾಲ್ ಮಂಗಳೂರಿನಲ್ಲಿ ಸಿಕ್ಕಿಬಿದ್ದಿದ್ದು, ಆತನಿಗೆ ಜಾಮೀನು ನೀಡಿದ್ದ ದಿನೇಶ್ ಎಂಬುವವರನ್ನೂ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಮಂಗಳೂರಿನ ನಿವಾಸಿ ಹರೀಶ್, ಅಪರಾಧ ಪ್ರಕರಣವೊಂದರಲ್ಲಿ ಜೈಲು ಸೇರಿದ್ದ. ತಂದೆಗೆ ಹುಷಾರಿಲ್ಲವೆಂದು ಹೇಳಿ ಪೆರೋಲ್ ಪಡೆದುಕೊಂಡು ಹೋಗಿದ್ದ. ಜುಲೈ 8ರಂದು ಪೆರೋಲ್ ಅವಧಿ ಮುಗಿದರೂ ವಾಪಸು ಜೈಲಿಗೆ ಬಂದಿರಲಿಲ್ಲ. ಈ ಬಗ್ಗೆ ಜೈಲಿನ ಅಧಿಕಾರಿಗಳು ದೂರು ನೀಡಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಹರೀಶ್ಗೆ ಪೆರೋಲ್ ಪಡೆಯಲು ಅಣ್ಣ ದಿನೇಶ್ ಜಾಮೀನು ಮುಚ್ಚಳಿಕೆ ಬರೆದುಕೊಟ್ಟಿದ್ದರು. ಹೀಗಾಗಿ, ಇಬ್ಬರ ವಿರುದ್ಧವೂ ಎಫ್ಐಆರ್ ದಾಖಲಿಸಿಕೊಳ್ಳಲಾಗಿತ್ತು.’
‘ಯುವತಿಯೊಬ್ಬರನ್ನು ಮದುವೆಯಾಗಿದ್ದ ಹರೀಶ್, ಮಂಗಳೂರಿನ ಸ್ಥಳವೊಂದಕ್ಕೆ ಭೇಟಿ ನೀಡುತ್ತಿರುವ ಮಾಹಿತಿ ಲಭ್ಯವಾಗಿತ್ತು. ಸ್ಥಳಕ್ಕೆ ಹೋದ ವಿಶೇಷ ತಂಡ ಕೈದಿಯನ್ನು ಬಂಧಿಸಿ ನಗರಕ್ಕೆ ಕರೆತಂದಿದೆ. ಅಣ್ಣ–ತಮ್ಮ ಇಬ್ಬರೂ ಇದೀಗ ಜೈಲಿನಲ್ಲಿದ್ದಾರೆ’ ಎಂದೂ ಮೂಲಗಳು ತಿಳಿಸಿವೆ.