ಬೆಂಗಳೂರು: ‘ಖಾಸಗಿ ಕಂಪನಿಗಳು ರೈತರ ಹೆಸರಿನಲ್ಲಿ ಸಂಸ್ಥೆ ಸ್ಥಾಪಿಸಿಕೊಂಡು ಕೋಳಿ ಮಾಂಸ ಉತ್ಪಾದನೆ ಮಾಡುವ ರೈತರಿಗೆ ಅನ್ಯಾಯ ಮಾಡುತ್ತಿವೆ’ ಎಂದು ರಾಜ್ಯ ಕೋಳಿ ಸಾಕಣೆದಾರರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಾಧ್ಯಕ್ಷ ಮಲ್ಲಾಪುರ ದೇವರಾಜ್ ಆರೋಪಿಸಿದರು.
ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,‘ ಕರ್ನಾಟಕ ಪೌಲ್ಟ್ರಿ ಫಾರ್ಮಸ್ಸ್ ಆ್ಯಂಡ್ ಬ್ರೀಡರ್ಸ್ ಅಸೋಸಿಯೇಷನ್ (ಕೆಪಿಎಫ್ಬಿಎ) ಹೆಸರಿನ ಮೂಲಕ ಖಾಸಗಿ ಕಂಪನಿಗಳು ಹೈಬ್ರಿಡ್ ತಳಿಯ ಕೋಳಿ ಸಾಕಣೆ ಕ್ಷೇತ್ರಕ್ಕೆ ಕಾಲಿಟ್ಟಿವೆ’ ಎಂದು ದೂರಿದರು.
‘ಕೋಳಿ ಮರಿ ಸಾಕಲು ರೈತರಿಗೆ ಉತ್ಪಾದನಾ ವೆಚ್ಚ ನೀಡುತ್ತಾರೆ. ರೈತರಿಂದ ಕಡಿಮೆ ಬೆಲೆಗೆ ಮಾಂಸ ಪಡೆದು ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಲಾಭ ಪಡೆಯುತ್ತಾರೆ. ಇದರಿಂದ ಸ್ವಂತ ಕೋಳಿ ಸಾಕಣೆ ಮಾಡುವ ರೈತರಿಗೆ ಅನ್ಯಾಯವಾಗುತ್ತಿದೆ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು. ರಾಜ್ಯದ ರೈತರಿಗೆ ಮಾರುಕಟ್ಟೆ ರಕ್ಷಣೆ ನೀಡಬೇಕು’ ಎಂದು ಮನವಿ ಮಾಡಿದರು.