ಯಾದಗಿರಿ: ‘ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ಗೆ ಒಂದು ಸ್ಥಾನ ಬಿಟ್ಟುಕೊಡುವಂತೆ ಕಾಂಗ್ರೆಸ್ನೊಂದಿಗೆ ಮಾತುಕತೆ ನಡೆಸಿದ್ದೇನೆ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
‘ಸ್ಥಾನ ಬಿಟ್ಟುಕೊಡದಿದ್ದರೆ ಕಾಂಗ್ರೆಸ್ ಸಂಪೂರ್ಣ ಅಸ್ತಿತ್ವ ಕಳೆದುಕೊಳ್ಳಲಿದೆ. ಐದು ಗ್ರಾಮ ಬಿಟ್ಟುಕೊಡುವಂತೆ ಪಾಂಡವರು ಕೇಳಿದ ನಂತರವೂ ಹಟ ಹಿಡಿದ ಕೌರವರ ಸ್ಥಿತಿ ಏನಾಯಿತು ಎಂಬುದು ತಿಳಿದಿದೆಯಲ್ಲ. ಅಂತಹ ಸ್ಥಿತಿಯನ್ನು ಕಾಂಗ್ರೆಸ್ ತಂದುಕೊಳ್ಳಲಿದೆ’ ಎಂದು ಮಂಗಳವಾರ ಭೀಮರಾಯನಗುಡಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.
ಹವಾ ನಡೆಯಲ್ಲ: ‘ಬಿಜೆಪಿಯ ಅಮಿತ್ ಶಾ ಎಷ್ಟೇ ಗುಡಿ ಗುಂಡಾರ ಸುತ್ತಿದರೂ, ಕಾಂಗ್ರೆಸ್ನ ರಾಹುಲ್ ಗಾಂಧಿ ಎಷ್ಟೇ ಡಬ್ಬಾ ಅಂಗಡಿ, ಡಾಬಾಗಳಲ್ಲಿ ಟಿಫಿನ್ ತಿಂದು ಟೀ, ಕಾಫಿ ಕುಡಿದರೂ ರಾಜ್ಯದಲ್ಲಿ ಅವರ ಹವಾ ನಡೆಯಲ್ಲ’ ಎಂದು ವ್ಯಂಗ್ಯವಾಡಿದರು.
‘ಎರಡೂ ರಾಷ್ಟ್ರೀಯ ಪಕ್ಷಗಳ ನಾಯಕರು ರಾಜ್ಯದಲ್ಲಿ ಮಠ, ಮಂದಿರ, ಮಸೀದಿಗಳಿಗೆ ಭೇಟಿ ಕೊಟ್ಟು ಜನರ ಭಾವನಾತ್ಮಕ ಸಂಬಂಧಗಳೊಂದಿಗೆ ಚೆಲ್ಲಾಟ ಆಡುತ್ತಿದ್ದಾರೆ. ಅವರ ಸೋಗಲಾಡಿತನ ರಾಜ್ಯದ ಜನರಿಗೆ ಗೊತ್ತಿಲ್ಲ ಅಂದುಕೊಂಡಿದ್ದಾರೆ. ಕನ್ನಡಿಗರು ಅಷ್ಟೊಂದು ಮೂರ್ಖರಲ್ಲ ಎಂಬುದನ್ನು ಈ ಚುನಾವಣೆ ನಿರ್ಧರಿಸಲಿದೆ’ ಎಂದರು.
ಬಾಲಿಶ ಹೇಳಿಕೆ: ‘ಅಮಿತ್ ಶಾ ಮತ್ತು ರಾಹುಲ್ ಗಾಂಧಿ ಮಹದಾಯಿ ವಿಚಾರದಲ್ಲಿ ಬಾಲಿಶ ಹೇಳಿಕೆ ನೀಡುತ್ತಿರುವುದು ಮುಜುಗರ ಉಂಟು ಮಾಡಿದೆ. ಅವರಿಗೆ ಮಹದಾಯಿ ಒಂದು ಅಂತರರಾಜ್ಯ ಸಮಸ್ಯೆ ಎಂಬುದು ಗೊತ್ತಿಲ್ಲವೇ’ ಎಂದು ಪ್ರಶ್ನಿಸಿದರು.
‘ಸಾಲಮನ್ನಾ ಮಾಡುವ ಮೂಲಕ ರೈತರ ಆತ್ಮಹತ್ಯೆ ತಡೆಗಟ್ಟುವ ಬದಲು ರೈತರ ಮನೆಯಿಂದ ಮುಷ್ಟಿ ಅಕ್ಕಿ ಸಂಗ್ರಹಿಸಿ ರೈತರೊಂದಿಗೆ ಊಟ ಮಾಡಲು ನಿರ್ಧರಿಸುವ ಬಿಜೆಪಿಯದು ಚುನಾವಣಾ ಗಿಮಿಕ್’ ಎಂದು ಟೀಕಿಸಿದರು