ಬೆಂಗಳೂರು: ಪರವಾನಗಿ ಪಡೆಯದ ಸಾಕು ಪ್ರಾಣಿಗಳ ಮಾರಾಟ ಅಂಗಡಿಗಳ ಮೇಲೆ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ, ಪೊಲೀಸ್ ಇಲಾಖೆ, ಬಿಬಿಎಂಪಿ, ಪಶು ಸಂಗೋಪನೆ ಮತ್ತು ಪಶು ವೈದ್ಯ ಸೇವಾ ಇಲಾಖೆಯ ಅಧಿಕಾರಿಗಳು ಹಾಗೂ ಪ್ರಾಣಿ ಕಲ್ಯಾಣ ಕಾರ್ಯಕರ್ತರು ಜಂಟಿ ಕಾರ್ಯಾಚರಣೆ ನಡೆಸಿ ಚಿಕಿತ್ಸೆ ಅಗತ್ಯವಿರುವ ಹಾಗೂ ಗಂಭೀರ ಸ್ಥಿತಿಯಲ್ಲಿರುವ ಪ್ರಾಣಿ ಹಾಗೂ ಪಕ್ಷಿಗಳನ್ನು ಬುಧವಾರ ರಕ್ಷಿಸಿದ್ದಾರೆ.
16 ತಳಿಯ ಒಟ್ಟು 1,344 ಪ್ರಾಣಿ ಹಾಗೂ ಪಕ್ಷಿಗಳನ್ನು ರಕ್ಷಿಸಲಾಗಿದೆ. ಒಟ್ಟು ಏಳು ತಂಡಗಳು ಕಾರ್ಯಾಚರಣೆ ನಡೆಸಿ ಅಪಾಯಕಾರಿ ಸ್ಥಿತಿಯಲ್ಲಿದ್ದ ಪ್ರಾಣಿ, ಪಕ್ಷಿಗಳ ಪತ್ತೆ ಹಚ್ಚಲಾಗಿದೆ.
ಸ್ವಚ್ಛವಿಲ್ಲದ ಪಂಜರಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಾಣಿಗಳನ್ನು ಇಟ್ಟಿರುವುದು, ತಾಯಿ ನಾಯಿಯಿಂದ ಬೇರ್ಪಡಿಸಿದ ನಾಯಿ ಮರಿಗಳನ್ನು ಮಾರಾಟಕ್ಕೆ ಇಟ್ಟಿರುವುದು, ಆಹಾರ ಅಥವಾ ನೀರಿನ ಸೌಕರ್ಯ ವಿಲ್ಲದಿರುವುದು, ಗಾಯಗೊಂಡ ಪ್ರಾಣಿಗಳಿಗೆ ಸೂಕ್ತ ಚಿಕಿತ್ಸೆ ನೀಡದೆ ಇರುವುದು ಮಳಿಗೆಗಳಲ್ಲಿ ಕಂಡುಬಂದಿದೆ.