ಕೆ.ಆರ್.ಪೇಟೆ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಕ್ಷಭೇದ ಮಾಡದೇ ತಾಲ್ಲೂಕಿಗೂ ಅನುದಾನ ಬಿಡುಗಡೆ ಮಾಡಿದ್ದು, ಅಭಿವೃದ್ಧಿಯಲ್ಲಿ ಶಾಸಕರ ಪಾತ್ರ ಏನೂ ಇಲ್ಲ’ ಎಂದು ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್ ಹೇಳಿದರು.
ತಾಲ್ಲೂಕಿನ ಶೀಳನೆರೆಯಲ್ಲಿ ಮತಪ್ರಚಾರ ನಡೆಸಿದ ಅವರು, ‘ನಾನು ಶಾಸಕನಾಗಿದ್ದಾಗ ಆರಂಭಿಸಿದ ಹಲವಾರು ಕಾಮಗಾರಿಗಳು ಸ್ಥಗಿತವಾಗಿವೆ ಶಾಸಕ ನಾರಾಯಣಗೌಡರ ಆಡಳಿತ ಶೈಲಿಯನ್ನು ಜೆಡಿಎಸ್ನವರೇ ಟೀಕಿಸುತ್ತಾರೆ’ ಎಂದರು.
‘ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ನನ್ನನ್ನು ಗೆಲ್ಲಿಸುವ ಮೂಲಕ ಮತ್ತೆ ತಾಲ್ಲೂಕಿನಲ್ಲಿ ಅಭಿವೃದ್ಧಿಯ ಶಕೆ ಆರಂಭಿಸಲು ಮತದಾರರು ಕಾಂಗ್ರೆಸ್ ಬೆಂಬಲಿಸಬೇಕು’ ಎಂದು ಕೋರಿದರು.
ಮನ್ಮುಲ್ ನಿರ್ದೇಶಕ ಅಂಬರೀಷ್ ಅವರು, ‘ತಾಲ್ಲೂಕಿನ ಪ್ರಗತಿಗಾಗಿ ಕಾಂಗ್ರೆಸ್ ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ್, ಬೇಲದಕೆರೆ ಪಾಪೇಗೌಡ, ರಾಜಶೇಖರ್, ಪರಮೇಶ್, ಶೀಳನೆರೆ ಹೋಬಳಿಯ ಕಾಂಗ್ರೆಸ್ ಪಕ್ಷದ ಮುಖಂಡರು ಇದ್ದರು.