ಬೆಂಗಳೂರು: ತಮ್ಮ ಸಮಾಜಕ್ಕೆ ಸೇರಿದ ಶಾಸಕರಿಗೆ ಸಚಿವ ಸ್ಥಾನ ನೀಡಿಲ್ಲ ಎಂದು ಆಕ್ರೋಶಗೊಂಡ ಬೋವಿ ಸಮುದಾಯಕ್ಕೆ ಸೇರಿದ ಶಾಸಕರ ಹಿಂಬಾಲಕರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನೆ ಮುಂದೆ ಗುರುವಾರ ಪ್ರತಿಭಟನೆ ನಡೆಸಿ, ಧಿಕ್ಕಾರ ಕೂಗಿದರು.
ಡಾಲರ್ಸ್ ಕಾಲೋನಿಯಲ್ಲಿರುವ ಧವಳಗಿರಿ ನಿವಾಸದ ಬಳಿ ಆಗಮಿಸಿದ ಬೋವಿ ಸಮುದಾಯಕ್ಕೆ ಸೇರಿದ ಶಾಸಕರ ಬೆಂಬಲಿಗರು, ‘ನಮ್ಮ ಶಾಸಕರಿಗೆ ಅನ್ಯಾಯವಾಗಿದೆ. ಸಮುದಾಯದ ನಾಲ್ವರು ಶಾಸಕರಲ್ಲಿ ಕನಿಷ್ಠ ಇಬ್ಬರಿಗಾದರೂ ಅವಕಾಶ ನೀಡಬೇಕು’ ಎಂದು ಆಗ್ರಹಿಸಿದರು.
ಹಾಲಾಡಿಗೆ ಸಚಿವ ಸ್ಥಾನಕ್ಕೆ ಆಗ್ರಹ: ನಿರಂತರ ಐದು ಬಾರಿ ಶಾಸಕರಾಗಿ ಆಯ್ಕೆಯಾದ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಬೆಂಗಳೂರು ಬಂಟರ ಸಂಘ ಆಗ್ರಹಿಸಿದೆ.
ಹಾಲಾಡಿಯವರನ್ನು ಕುಂದಾಪುರದ ವಾಜಪೇಯಿ ಎಂದೂ ಕರೆಯುತ್ತಾರೆ. ಅವರ ಹಿರಿತನವನ್ನು ಗಮನಿಸದೇ ಇರುವುದು ಸರಿಯಲ್ಲ. ಇದು ಬಂಟರ ಸಮಾಜಕ್ಕೆ ಮಾಡಿದ ಅನ್ಯಾಯ ಎಂದು ಬಂಟರ ಸಂಘದ ಅಧ್ಯಕ್ಷ ಆರ್.ಉಪೇಂದ್ರಶೆಟ್ಟಿ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.