ಬೆಂಗಳೂರು: ‘ಬೆಂಗಳೂರು ಮಹಾನಗರದಲ್ಲಿ ಇತ್ತೀಚೆಗೆ ಸುರಿದಿರುವ ಭಾರಿ ಮಳೆಯಿಂದಾಗಿ ಸಂತ್ರಸ್ತರಾದವರ ನೆರವಿಗೆ ತಕ್ಷಣ ಧಾವಿಸಬೇಕು, ಅವರಿಗೆ ಉಚಿತ ಆಹಾರ, ವಸತಿ, ಕುಡಿಯುವ ನೀರು ಮತ್ತಿತರ ಅಗತ್ಯತೆ ಪೂರೈಸ ಬೇಕು’ ಎಂದು ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ, ಬಿಬಿಎಂಪಿಗೆ ಆದೇಶಿಸಿದೆ.
ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಕೆ.ಎನ್. ಕೇಶವನಾರಾಯಣ ಅವರ ಅಧ್ಯಕ್ಷತೆಯಲ್ಲಿ ಸಂತಸ್ತರಿಗೆ ನೆರವು ನೀಡುವ ಕುರಿತು ಬಿಬಿಎಂಪಿ, ಬಿಡಿಎ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಹಲವು ನಿರ್ದೇಶನ ನೀಡಲಾಗಿದೆ.
ಬಿಬಿಎಂಪಿ ಇತರೆ ಸಂಸ್ಥೆಗಳ ನೆರವಿನಿಂದ ಕೂಡಲೇ ಮನೆಗಳಲ್ಲಿರುವ ನುಗ್ಗಿರುವ ನೀರು ಹೊರಹಾಕಲು ಕ್ರಮ ಕೈಗೊಳ್ಳಬೇಕು ಮತ್ತು ಪ್ರವಾಹ ಪೀಡಿತ ಪ್ರದೇಶಗಳನ್ನು ಗುರುತಿಸಬೇಕು, ಆಗಿರುವ ನಷ್ಟವನ್ನು ಅಂದಾಜು ಮಾಡಬೇಕು.
‘ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಮತ್ತು ಜಿಲ್ಲಾ ಪ್ರಾಧಿಕಾರದಮೂಲಕ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿ zಕಾರದ ಸಂತ್ರಸ್ತರ ನೆರವಿನ ಯೋಜನೆ 2010ರ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು’ ಎಂದೂ ನಿರ್ದೇಶಿಸಲಾಗಿದೆ.
ಬಿಬಿಎಂಪಿ ಪ್ರವಾಹ ಪೀಡಿತ ಸಂತ್ರಸ್ತರಿಗೆ ನಿಯಮದಂತೆ ಉಚಿತ ಆಹಾರ, ಹೊದಿಕೆ, ಶುದ್ಧ ಕುಡಿಯುವ ನೀರು ಸೇರಿ ಎಲ್ಲ ರೀತಿಯ ಪರಿಹಾರ ಒದಗಿಸಬೇಕು. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಆರೋಗ್ಯ ಶಿಬಿರಗಳನ್ನು ಆಯೋಜಿಸಿ ಸಾಂಕ್ರಾಮಿಕ ಕಾಯಿಲೆಗಳಿಂದ ಜನರ ಆರೋಗ್ಯ ರಕ್ಷಣೆ ಮುಂದಾಗಬೇಕು ಎಂದು ಸೂಚಿಸಲಾಗಿದೆ.
ಪ್ರವಾಹದಿಂದ ಬಾಧಿತವಾಗಿರುವ ಕಾರ್ಮಿಕ ರಿಗೆ ಪರಿಹಾರ ಕಿಟ್ ಗಳನ್ನು ವಿತರಿಸುವಂತೆ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿಗೆ ನಿರ್ದೇಶನ ನೀಡಿದೆ.