ಬೆಂಗಳೂರು: ಬೇಸರದಿಂದ ತಾಯಿಯ ಮೊಬೈಲ್ಗೆ ಸಂದೇಶ ಕಳುಹಿಸಿದ್ದರು ಎನ್ನಲಾದ ಮಾಯಾಜಲ ಸಿಂಗ್ (19) ಎಂಬುವರು ಶನಿವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
‘ಕೋರಮಂಗಲದ ಪಬ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಸಿಂಗ್, ಸ್ನೇಹಿತರ ಜೊತೆ ಈಜಿಪುರದಲ್ಲಿ ವಾಸವಿದ್ದರು. ಮನೆಯ ಕೊಠಡಿಯಲ್ಲೇ ಫ್ಯಾನ್ಗೆ ನೇಣು ಹಾಕಿಕೊಂಡಿದ್ದಾರೆ’ ಎಂದು ವಿವೇಕ್ನಗರ ಪೊಲೀಸರು ಹೇಳಿದರು.
’ಶನಿವಾರ ಕೆಲಸಕ್ಕೆ ರಜೆ ಹಾಕಿದ್ದ ಸಿಂಗ್, ಮನೆಯಲ್ಲೇ ಇದ್ದರು. ರಾತ್ರಿ ಅಡುಗೆ ಮಾಡುವುದಕ್ಕಾಗಿ ಅಂಗಡಿಗೆ ಹೋಗಿ ಮೊಟ್ಟೆ ಸಹ ತಂದಿಟ್ಟುಕೊಂಡಿದ್ದರು.ಸ್ನೇಹಿತರೆಲ್ಲರೂ ಎಂದಿನಂತೆ ಸಂಜೆ ಪಬ್ಗೆ ಕೆಲಸಕ್ಕೆ ಹೋಗಿದ್ದರು.’
‘ರಾತ್ರಿಯೇ ತಾಯಿಯ ಮೊಬೈಲ್ಗೆ ಸಂದೇಶ ಕಳುಹಿಸಿದ್ದ ಸಿಂಗ್, ಆ ನಂತರವೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂದೇಶ ನೋಡಿ ಗಾಬರಿಗೊಂಡಿದ್ದ ತಾಯಿ, ಮಗನಿಗೆ ಏನೋ ಆಗಿದೆ ಎಂಬುದಾಗಿ ಸ್ನೇಹಿತರಿಗೆ ಹೇಳಿದ್ದರು. ಅವರೆಲ್ಲ ಮನೆಗೆ ಹೋಗಿ ನೋಡಿದಾಗಲೇ ವಿಷಯ ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.
‘ಸಿಂಗ್ ಅವರ ಆತ್ಮಹತ್ಯೆಗೆ ನಿಖರ ಕಾರಣ ಗೊತ್ತಾಗಿಲ್ಲ. ಸ್ನೇಹಿತರು ಹಾಗೂ ಪಬ್ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿ ಮಾಹಿತಿ ಸಂಗ್ರಹಿಸಲಾಗುತ್ತಿದೆ’ ಎಂದು ತಿಳಿಸಿದರು.