ಬೆಂಗಳೂರು: ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಡೀಮ್ಡ್ ಅರಣ್ಯ ವ್ಯಾಪ್ತಿಯಲ್ಲಿ ಜಮೀನು ಸಾಗುವಳಿ ಮಾಡಿಕೊಂಡವರಿಗೆ ಜಮೀನು ಸಕ್ರಮಗೊಳಿಸಲು ಆದಷ್ಟು ಬೇಗ ಕ್ರಮ ತೆಗೆದುಕೊಳ್ಳುವುದಾಗಿ ಕಂದಾಯ ಸಚಿವ ಆರ್.ಅಶೋಕ ಅವರು ವಿಧಾನಸಭೆಯಲ್ಲಿ ಭರವಸೆ ನೀಡಿದರು.
ಇತ್ತೀಚೆಗೆ ಅರಣ್ಯ ಇಲಾಖೆ ಸುಮಾರು 6 ಲಕ್ಷ ಹೆಕ್ಟೇರ್ ಭೂಮಿಯನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸಲು ಒಪ್ಪಿಕೊಂಡಿದೆ. ಅರಣ್ಯ ಇಲಾಖೆ ಬಳಿ 3 ಲಕ್ಷ ಹೆಕ್ಟೇರ್ಗಳಷ್ಟು ಭೂಮಿ ಉಳಿಯಲಿದೆ ಎಂದು ಬಿಜೆಪಿಯ ಸಂಜೀವ ಮಠಂದೂರು ಮತ್ತು ಕಾಂಗ್ರೆಸ್ನ ಟಿ.ಡಿ. ರಾಜೇಗೌಡ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದರು.
ಕೊಡಗಿನ ಬಾಣೆ ಜಮೀನನ್ನು ಸೆಕ್ಷನ್ 17 ಬಿ ಅಡಿ ತಂದಂತೆ ಮಲೆನಾಡು ಭಾಗದಲ್ಲಿರುವ ಸೊಪ್ಪಿನ ಬೆಟ್ಟ ಮತ್ತು ಅದಕ್ಕೆ ಸಮಾನಾಂತರವಾಗಿ ಬಳಸುವ ಪದಗಳ ಜಮೀನುಗಳನ್ನು ಇದೇ ಸೆಕ್ಷನ್ ಅಡಿ ತರುವಂತೆ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸಲಹೆ ನೀಡಿದರು. ಅದಕ್ಕೆ ಸಚಿವ ಅಶೋಕ ಒಪ್ಪಿಗೆ ಸೂಚಿಸಿದರು.