ಬೆಂಗಳೂರು: ‘ರಾಜ್ಯದಲ್ಲಿರುವ ಕ್ರೈಸ್ತರು ಕನ್ನಡ ನಾಡು ಮತ್ತು ಸಂಸ್ಕೃತಿಯ ಉಳಿವಿಗಾಗಿ ಹೋರಾಟ ಮಾಡುತ್ತಿರುವುದು ಶ್ಲಾಘನೀಯ. ರಾಜ್ಯದಲ್ಲಿ ವಾಸಿಸುವ ಎಲ್ಲ ಧರ್ಮದವರೂ ಕನ್ನಡವನ್ನು ಗೌರವಿಸಬೇಕು’ ಎಂದು ಕಂದಾಯ ಸಚಿವ ಆರ್.ಅಶೋಕಭಾನುವಾರ ಹೇಳಿದರು.
ಅಖಿಲ ಕರ್ನಾಟಕ ಕ್ಯಾಥೋಲಿಕ್ ಕ್ರೈಸ್ತರ ಕನ್ನಡ ಸಂಘ ಹಾಗೂ ಕರ್ನಾಟಕ ಕ್ರೈಸ್ತರ ಕನ್ನಡಾಭಿಮಾನಿಗಳ ಒಕ್ಕೂಟ ನಗರದಲ್ಲಿ ಏರ್ಪಡಿಸಿದ್ದ ಕ್ರೈಸ್ತರ ಅಭಿವೃದ್ಧಿ ಮಂಡಳಿಯ ನೂತನ ಅಧ್ಯಕ್ಷ ಜೆ.ಶಾಂತಕುಮಾರ್ ಕೆನಡಿ ಅವರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಕ್ರೈಸ್ತರ ಕನ್ನಡ ಸಂಘದ ಅಧ್ಯಕ್ಷ ರಫಾಯಲ್ ರಾಜ್, ‘ಕ್ರೈಸ್ತರ ಅಭಿವೃದ್ಧಿ ಮಂಡಳಿಯನ್ನು ಅಲ್ಪಸಂಖ್ಯಾತರ ಅಭಿವೃದ್ಧಿ ಮಂಡಳಿ’ಯಿಂದ ಬೇರ್ಪಡಿಸಬೇಕು. ಸ್ವತಂತ್ರವಾದ ಮಂಡಳಿ ರಚಿಸಿ, ₹500 ಕೋಟಿ ಅನುದಾನ ನೀಡಬೇಕು’ ಎಂದು ಒತ್ತಾಯಿಸಿದರು.
ಬೆಂಗಳೂರು ಮಹಾಧರ್ಮ ಕ್ಷೇತ್ರದ ಧರ್ಮಗುರು ಫಾದರ್ ಸೈಮನ್ ಬರ್ತಲೋಮಿಯೊ ಮಾತನಾಡಿದರು. ಸಂತ ಜೋಸೆಫರ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಅಂತೋನಿ ಪ್ರಸಾದ್, ದಲಿತ ಕ್ಯಾಥೋಲಿಕ್ ಕ್ರೈಸ್ತರ ರಕ್ಷಣಾ ವೇದಿಕೆ ಪ್ರಧಾನ ಕಾರ್ಯದರ್ಶಿ ವೆಟ್ರಿ ಸೆಲ್ವನ್ ಇದ್ದರು.