ರಾಜರಾಜೇಶ್ವರಿನಗರ: ‘ನಾಟಕವೂ ಒಂದು ರಾಜಕಾರಣವಿದ್ದಂತೆ. ಚರಿತ್ರೆ, ಸಂಸ್ಕೃತಿಯನ್ನು ನಾಟಕದಲ್ಲಿ ಅಭಿನಯಿಸಿ ತೋರಿಸುವುದೇ ವಿಶೇಷವಾಗಿದೆ’ ಎಂದು ರಂಗನಿರ್ದೇಶಕ ಸಿ.ಬಸವಲಿಂಗಯ್ಯ ಹೇಳಿದರು.
ಉಲ್ಲಾಳು ಸಮೀಪದ ರಾಷ್ಟ್ರಕವಿ ಕುವೆಂಪು ರಸ್ತೆಯ ನಗೆಮನೆಯಲ್ಲಿ ಹಮ್ಮಿಕೊಂಡಿದ್ದ ವಸಂತ ನಾಟಕೋತ್ಸವದಲ್ಲಿ ಮಾತನಾಡಿದ ಅವರು, ‘ನಗರೀಕರಣದ ವ್ಯಾಮೋಹದಿಂದ ನಾವು ಹೊರಬಂದು ಪ್ರಕೃತಿಯ ಸವಿಯನ್ನು ಅನುಭವಿಸಿಕೊಂಡು ಬರುವುದೇ ನಾಟಕವಾಗಿದೆ’ ಎಂದರು.
ಲೇಖಕ ಆರ್.ಜಿ.ಹಳ್ಳಿನಾಗರಾಜ್, ‘ಪ್ರತಿಯೊಂದು ಬಡಾವಣೆಗಳಲ್ಲಿ ನಗೆಮನೆಯಂತಹ ವೇದಿಕೆಗಳನ್ನು ಸೃಷ್ಟಿಸಿ ಕಲಾವಿದರಿಂದ ನಾಟಕ ಪ್ರದರ್ಶಿಸಿದರೆ ಉತ್ತಮವಾಗಿರುತ್ತದೆ. ಈ ದಿನದ ಇಂದೂರಿನ ಮಹಾರಾಣಿ ಅಹಲ್ಯಾಬಾಯಿ ಹೋಳ್ಕರ್ ನಾಟಕವು ಕೋಮು ಸೌಹಾರ್ದ ವಾತಾವರಣದ ಪ್ರಸಂಗವನ್ನು ಪರೋಕ್ಷವಾಗಿ ಬಿಂಬಿಸುತ್ತಿದ್ದು ಇಂದಿನ ರಾಜಕಾರಣಿಗಳಿಗೆ ಬುದ್ಧಿ ಹೇಳುವಂತಿದೆ’ ಎಂದರು.
ನಗೆ ಮನೆ ಅಧ್ಯಕ್ಷ ಎಸ್.ಮಾದಯ್ಯ ಅವರಿಗೆ ರಂಗಗೌರವ ಅರ್ಪಿಸಿ ಸನ್ಮಾನಿಸಲಾಯಿತು. ರಂಗಕರ್ಮಿ ಸಂಸ್ಥಾಪಕ ಕಾರ್ಯದರ್ಶಿ ಛಾಯಾ ಭಾರ್ಗವಿ ಎಸ್.ಹೆಚ್, ನಾಟಕಕಾರ ಬಿ.ಬಸವರಾಜ್, ಮಾಲತೇಶ್ ಬಡಿಗೇರ, ನಗೆಮನೆ ಗೌರವಾಧ್ಯಕ್ಷ ಎಸ್.ರಾಮದಾಸ್ನಾಯಕ್ ಪುಟ್ಟಸ್ವಾಮಿ ಹಾಗೂ ನಗೆಮನೆಯ ಎಲ್ಲ ಸದಸ್ಯರು ಉಪಸ್ಥಿತರಿದ್ದರು.
ಅದಮ್ಯ ರಂಗ ಸಂಸ್ಕೃತಿ ಟ್ರಸ್ಟ್ ಹಾಗೂ ಉಲ್ಲಾಳು ವಾರ್ಡ್ ನಾಗರಿಕರ ವೇದಿಕೆ ಸಹಯೋಗ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.