ಬೆಂಗಳೂರು: ತ್ರಿಪುರಾದಿಂದ ರೈಲಿನ ಮೂಲಕ ಗಾಂಜಾ ತಂದು ನಗರದಲ್ಲಿ ಮಾರುತ್ತಿದ್ದ ಮೂವರು ಆರೋಪಿಗಳನ್ನು ಶ್ರೀರಾಮಪುರ ಪೊಲೀಸರು ಬಂಧಿಸಿದ್ದಾರೆ.
'ತ್ರಿಪುರಾದ ಜಾವೀದ್ ಹುಸೇನ್ (23), ಮುಸ್ಸಾಮೀಯಾ (23) ಹಾಗೂ ಅಬ್ದುಲ್ ಮುಸ್ನಾದ್ (22) ಬಂಧಿತರು. ಇವರಿಂದ 15 ಕೆ.ಜಿ ಗಾಂಜಾ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದ ಆರೋಪಿಗಳು, ಭದ್ರತಾ ಏಜೆನ್ಸಿಗಳಿಗೆ ಸೇರಿದ್ದರು. ಖಾಸಗಿ ಕಂಪನಿ ಹಾಗೂ ವಿವಿಧ ಅಪಾರ್ಟ್ಮೆಂಟ್ ಸಮುಚ್ಚಯಗಳಲ್ಲಿ ಭದ್ರತೆಗೆ ಆರೋಪಿಗಳನ್ನು ನಿಯೋಜಿಸಲಾಗುತ್ತಿತ್ತು. ಭದ್ರತಾ ಕೆಲಸದ ಜೊತೆಯಲ್ಲೇ ಆರೋಪಿಗಳು, ಗಾಂಜಾ ಮಾರಿ ಹಣ ಸಂಪಾದಿಸುತ್ತಿದ್ದರು’ ಎಂದೂ ತಿಳಿಸಿದರು.
‘ಆರೋಪಿಗಳು ತ್ರಿಪುರಾಗೆ ಆಗಾಗ ರೈಲಿನಲ್ಲಿ ಹೋಗಿ ಬರುತ್ತಿದ್ದರು. ಗಾಂಜಾ ಪೊಟ್ಟಣಗಳನ್ನು ಬ್ಯಾಗ್ನಲ್ಲಿರಿಸಿಕೊಂಡು ನಗರಕ್ಕೆ ತರುತ್ತಿದ್ದರು. ಪರಿಚಯಸ್ಥರ ಮೂಲಕ ಗಾಂಜಾವನ್ನು ಗ್ರಾಹಕರಿಗೆ ಮಾರುತ್ತಿದ್ದರೆಂಬ ಸಂಗತಿ ತನಿಖೆಯಿಂದ ಗೊತ್ತಾಗಿದೆ’ ಎಂದೂ ಹೇಳಿದರು.
‘ಶ್ರೀರಾಮಪುರ ಠಾಣೆ ವ್ಯಾಪ್ತಿಯಲ್ಲಿ ಬೈಕ್ನಲ್ಲಿ ಆರೋಪಿಗಳು ಗಾಂಜಾ ಸಾಗಿಸುತ್ತಿದ್ದರು. ಕಾರ್ಯಾಚರಣೆ ನಡೆಸಿ ಗಾಂಜಾ ಸಮೇತ ಆರೋಪಿಗಳನ್ನು ಬಂಧಿಸಲಾಯಿತು’ ಎಂದೂ ತಿಳಿಸಿದರು.