ಯಲಹಂಕ: ರೈಲ್ವೆ ಖಾಸಗೀಕರಣ ಮಾಡುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿ, ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ರೈಲುಗಾಲಿ ಕಾರ್ಖಾನೆಯ ಮಜ್ದೂರ್ ಯೂನಿಯನ್ ಸದಸ್ಯರು ಹಾಗೂ ಕಾರ್ಮಿಕರು, ಕಾರ್ಖಾನೆಯ ಪಶ್ಚಿಮ ಬಡಾವಣೆಯ ರಸ್ತೆಗಳಲ್ಲಿ ಬೈಕ್ ರ್ಯಾಲಿ ನಡೆಸಿದರು.
ಕೇಂದ್ರ ಸರ್ಕಾರ ಮತ್ತು ರೈಲ್ವೆ ಮಂಡಳಿ ಕಾರ್ಮಿಕ ವಿರೋಧಿ ನೀತಿಗಳನ್ನು ಅನುಸರಿಸುತ್ತಿವೆ ಎಂದು ದೂರಿದ ಕಾರ್ಮಿಕರು, ಘೋಷಣೆಗಳನ್ನು ಕೂಗಿದರು.
ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜಿ.ಎ.ವಿಜಯಕುಮಾರ್ ಮಾತನಾಡಿ, ’ಕಾರ್ಮಿಕರ ತುಟ್ಟಿ ಭತ್ಯೆ ಬಿಡುಗಡೆಗೊಳಿಸುವುದರ ಜೊತೆಗೆ ಹೊಸ ಪಿಂಚಣಿ ಪದ್ಧತಿಯನ್ನು ರದ್ದುಗೊಳಿಸಿ, ಹಳೇ ಪಿಂಚಣಿ ಪದ್ಧತಿಯನ್ನು ಜಾರಿಗೊಳಿಸಬೇಕು. ಹುದ್ದೆಗಳನ್ನು ಕಡಿತಗೊಳಿಸುವುದನ್ನು ನಿಲ್ಲಿಸಿ ಖಾಲಿಯಿರುವ ಹುದ್ದೆಗಳನ್ನು ಭರ್ತಿಮಾಡಬೇಕು‘ ಎಂದರು.
ಒಕ್ಕೂಟದ ಅಧ್ಯಕ್ಷ ಡಿ.ಮಹೇಂದ್ರ ಮಾತನಾಡಿ, ’ಸಾರ್ವಜನಿಕ ವಲಯದ ರೈಲ್ವೆಯನ್ನು ಖಾಸಗಿಯವರಿಗೆ ಅದರಲ್ಲೂ ಏಕಸ್ವಾಮ್ಯ ಬಂಡವಾಳಗಾರರಿಗೆ ಹಸ್ತಾಂತರಿಸುವ ಈ ನೀತಿಯು, ಬೆರಳೆಣಿಕೆಯಷ್ಟು ಬಂಡವಾಳಗಾರರಿಗೆ ಹಾಗೂ ಕಾರ್ಪೊರೇಟ್ ಕುಳಗಳಿಗೆ ಮಾತ್ರ ಲಾಭವಾಗಲಿದೆ. ಆದ್ದರಿಂದ ಕೇಂದ್ರ ಸರ್ಕಾರ ಕೂಡಲೇ ಖಾಸಗೀಕರಣ ಮಾಡುವ ನಿರ್ಧಾರವನ್ನು ವಾಪಸ್ ಪಡೆಯಬೇಕು‘ ಎಂದು ಆಗ್ರಹಿಸಿದರು.
ಪದಾಧಿಕಾರಿಗಳಾದ ದಯಾನಂದ ರಾವ್, ವಿನಯ್ ಕುಮಾರ್, ಶಂಕರ್ ಇದ್ದರು.