ಬೆಂಗಳೂರು: ನಗರದಲ್ಲಿ ಬುಧವಾರ ರಾತ್ರಿ ಸುರಿದ ಗಾಳಿ ಸಹಿತ ಮುಂಗಾರು ಪೂರ್ವ ಮಳೆಗೆ ಎಂಟು ಕಡೆಗಳಲ್ಲಿ ಮರಗಳು ಧರೆಗೆ ಉರುಳಿದವು.
ಬೆಳಿಗ್ಗೆಯಿಂದಬಿಸಿಲು–ಮೋಡಗಳ ಕಣ್ಣಾಮುಚ್ಚಾಲೆ ಇತ್ತು. ಸಂಜೆ ಹೊತ್ತಿಗೆ ಮೋಡ ದಟ್ಟವಾಗಿ, ಸಾಧಾರಣ ಮಳೆ ಸುರಿಯಿತು. ಈ ವೇಳೆ ಮಳೆಗಿಂತ ಹೆಚ್ಚು ಗುಡುಗಿನ ಆರ್ಭಟವೇ ಜೋರಾಗಿತ್ತು.
ನಾಗರಬಾವಿ, ಜೆ.ಪಿ.ನಗರ, ಸಾರಕ್ಕಿ, ವಿಜ್ಞಾನನಗರ, ಲಗ್ಗೆರೆ, ರಾಜಾಜಿನಗರ, ಬನಶಂಕರಿ ಹಾಗೂ ಹಲಸೂರುಗಳಲ್ಲಿ ಸಾಧಾರಣ ಮಳೆ ಸುರಿಯಿತು.
ಉತ್ತರದಲ್ಲಿ ಹೆಚ್ಚು ಮಳೆ ಸುರಿಯಿತು. ಸಿಂಗನಾಯಕನಹಳ್ಳಿಯಲ್ಲಿ 98 ಮಿ.ಮೀ, ಕೋಣನಕುಂಟೆಯಲ್ಲಿ 64 ಮಿ.ಮೀ, ಸಾರಕ್ಕಿ 72 ಮಿ.ಮೀ ಹಾಗೂ ವಿಜ್ಞಾನನಗರದಲ್ಲಿ 78 ಮಿ.ಮೀ ಮಳೆ ಬಿದ್ದ ವರದಿಯಾಗಿದೆ.
ನಾಗರಬಾವಿ, ಜೆ.ಪಿ.ನಗರ, ರಾಜಾಜಿನಗರ, ಡಿ ಗ್ರೂಪ್ ಬಡಾವಣೆ, ಹಲಸೂರು, ಶೇಷಾದ್ರಿಪುರ,ಪಾಪರೆಡ್ಡಿಪಾಳ್ಯ ಹಾಗೂ ಲಗ್ಗೆರೆಯಲ್ಲಿ ಮರಗಳು ಉರುಳಿದವು. ಬಿಬಿಎಂಪಿ ಸಿಬ್ಬಂದಿ ಮರಗಳನ್ನು ತೆರವುಗೊಳಿಸಿದರು.