ಬೆಂಗಳೂರು: ನಗರದಲ್ಲಿ ಕೆಲದಿನಗಳಿಂದ ಬಿಡುವು ಕೊಡುತ್ತಲೇ ಜೋರು ಮಳೆ ಆಗುತ್ತಿದ್ದು, ಮಂಗಳವಾರ ಸಂಜೆಯೂ ಹಲವೆಡೆ ಮಳೆ ಸುರಿಯಿತು.
ಬಹುತೇಕ ಪ್ರದೇಶಗಳಲ್ಲಿ ಮಂಗಳವಾರ ಬೆಳಿಗ್ಗೆಯಿಂದಲೇ ಬಿಸಿಲಿನ ಜೊತೆ, ಆಗಾಗ ಮೋಡ ಕವಿದ ವಾತಾವರಣ ಕಾಣಿಸಿಕೊಂಡಿತು. ಸಂಜೆ ವೇಳೆ ಸುರಿಯ ಲಾರಂಭಿಸಿದ ಮಳೆ, ರಾತ್ರಿಯವರೆಗೂ ಇತ್ತು.
ಗಾಂಧಿನಗರ, ಮೆಜೆಸ್ಟಿಕ್, ಎಂ.ಜಿ. ರಸ್ತೆ, ಶಿವಾಜಿನಗರ, ಅಶೋಕನಗರ, ಕೋರಮಂಗಲ, ಆಡುಗೋಡಿ, ಮಡಿವಾಳ, ಸುತ್ತಮುತ್ತ ಸ್ಥಳಗಳಲ್ಲಿ ಜೋರು ಮಳೆ ಇತ್ತು.
ರಾಜಾಜಿನಗರ, ವಿಜಯನಗರ, ಯಶವಂತಪುರ ಹಾಗೂ ಇತರೆ ಪ್ರದೇಶಗಳಲ್ಲಿ ತುಂತುರು ಮಳೆಯಾಯಿತು. ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ ಬಳಿಯ ಕೆಳಸೇತುವೆಯಲ್ಲಿ ನೀರು ಧಾರಾಕಾರವಾಗಿ ಹರಿಯಿತು. ಅದರಲ್ಲೇ ವಾಹನಗಳು ಸಂಚರಿಸಿದವು. ಕೆಲ ವಾಹನಗಳು ಕೆಟ್ಟು ನಿಂತಿದ್ದವು. ಅವುಗಳನ್ನು ಸ್ಥಳೀಯರೇ ತಳ್ಳಿ ಸುರಕ್ಷಿತ ಸ್ಥಳಕ್ಕೆ ತಲುಪಿಸಿದರು.
ಕನ್ನಿಂಗಹ್ಯಾಮ್ ರಸ್ತೆ ಹಾಗೂ ಕೋರಮಂಗಲದ 17ನೇ ಮುಖ್ಯರಸ್ತೆಯಲ್ಲಿ ಮರದ ಕೊಂಬೆಗಳು ಬಿದ್ದಿದ್ದವು. ಇದನ್ನು ಹೊರತುಪಡಿಸಿ ಬೇರೆ ಯಾವುದೇ ಘಟನೆಗಳು ಸಂಭವಿಸಿಲ್ಲವೆಂದು ಬಿಬಿಎಂಪಿ ಸಹಾಯವಾಣಿ ಸಿಬ್ಬಂದಿ ತಿಳಿಸಿದ್ದಾರೆ.