ಬೆಂಗಳೂರು: ನಗರದ ಹಲವು ಪ್ರದೇಶಗಳಲ್ಲಿ ಸೋಮವಾರ ಧಾರಾಕಾರ ಮಳೆಯಾಗಿದೆ.
ಜೋರು ಮಳೆಯಿಂದ ಹಲವು ಕಡೆ ಚರಂಡಿಗಳಲ್ಲಿ ಮಳೆಯ ನೀರು ಉಕ್ಕಿ ರಸ್ತೆಯ ಮೇಲೆ ಹರಿಯಿತು. ಕೆಲವು ಕಡೆ ಕೆಳಸೇತುವೆಗಳಲ್ಲಿ ನೀರು ಸಂಗ್ರಹಗೊಂಡು, ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯಿತು.
ಕೆಲವು ದಿನಗಳಿಂದ ಮೋಡ ಕವಿದ ವಾತಾವರಣ ಇದ್ದರೂ ಜೋರು ಮಳೆಯಾಗುತ್ತಿರಲಿಲ್ಲ. ಸೋಮವಾರ ಹಲವೆಡೆ ವರುಣ ಅಬ್ಬರಿಸಿದೆ. ಸೋಮವಾರವೂ ಬೆಳಿಗ್ಗೆಯಿಂದ ಬಿಸಿಲ ವಾತಾವರಣವೇ ಇತ್ತು. ಮಧ್ಯಾಹ್ನ 3 ಗಂಟೆ ಸುಮಾರಿಗೆ ಜೋರು ಮಳೆಯಾಗಿದೆ. ಸಂಜೆಯವರೆಗೂ ಕೆಲವೆಡೆ ಜಿಟಿ ಜಿಟಿ ಮಳೆಯಾಗುತ್ತಲೇ ಇತ್ತು. ರಾತ್ರಿಯೂ ಅಲ್ಲಲ್ಲಿ ಉತ್ತಮ ಮಳೆಯಾಯಿತು.
ರಾಜಾಜಿನಗರ, ಯಶವಂತಪುರ, ಮಲ್ಲೇಶ್ವರ, ರಾಜರಾಜೇಶ್ವರಿನಗರ, ನಾಯಂಡನಹಳ್ಳಿ, ಹೊಸಕೆರೆಹಳ್ಳಿ, ಗಿರಿನಗರ, ದೀಪಾಂಜಲಿನಗರ, ವಿಜಯನಗರ, ಪೀಣ್ಯ, ದಾಸರಹಳ್ಳಿ, ಜಾಲಹಳ್ಳಿ, ನಾಗಸಂದ್ರ, 8ನೇ ಮೈಲಿ, ವಿದ್ಯಾರಣ್ಯಪುರ, ದೊಡ್ಡ ಬೊಮ್ಮಸಂದ್ರ, ಹೆಬ್ಬಾಳ, ಆರ್.ಟಿ. ನಗರ, ವಸಂತನಗರ, ನಾಗಾವರ, ಹೆಣ್ಣೂರು, ಬಾಣಸವಾಡಿ ಸುತ್ತಮುತ್ತ ಸ್ಥಳಗಳಲ್ಲಿ ಉತ್ತಮ ಮಳೆಯಾಗಿದೆ.
ಜಯನಗರ, ಜೆ.ಪಿ.ನಗರ, ಬನಶಂಕರಿ, ಹನುಮಂತನಗರ, ಬಸವನಗುಡಿ, ಚಾಮರಾಜಪೇಟೆ, ಮೆಜೆಸ್ಟಿಕ್, ಶಿವಾಜಿನಗರ, ಎಂ.ಜಿ.ರಸ್ತೆ, ಅಶೋಕನಗರ, ಕೋರಮಂಗಲ, ಮಡಿವಾಳ, ಗಾಂಧಿನಗರ ಸುತ್ತಮುತ್ತಲೂ ಮಳೆಯಾಯಿತು. ಮಳೆಯಲ್ಲೇ ದ್ವಿಚಕ್ರ ವಾಹನ ಸವಾರರು ಸಾಗಿದರು. ಪಾದಚಾರಿಗಳು ಮಳೆಯಿಂದ ರಕ್ಷಣೆ ಪಡೆಯಲು ಕೊಡೆಯ ಮೊರೆ ಹೋಗಿದ್ದರು.
ಒಕಳಿಪುರ ರೈಲ್ವೆ ಕೆಳ ಸೇತುವೆ, ಶಿವಾನಂದ ವೃತ್ತ, ಶೇಷಾದ್ರಿಪುರ ಕೆಳಸೇತುವೆಯಲ್ಲಿ ಅಲ್ಪಪ್ರಮಾಣದ ನೀರು ಸಂಗ್ರಹಗೊಂಡಿತ್ತು. ರಾತ್ರಿ ವೇಳೆಗೆ ಮಳೆ ನಿಂತಿದ್ದರಿಂದ ಸಂಚಾರಕ್ಕೆ ಅಡ್ಡಿಯಾಗಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.