ದಾಬಸ್ ಪೇಟೆ: ಆರಂಭದಲ್ಲಿ ಕೈಕೊಟ್ಟಿದ್ದ ಮುಂಗಾರು ಮಳೆ ಕಳೆದೊಂದು ತಿಂಗಳಿಂದ ಚುರುಕುಗೊಂಡಿದ್ದು, ಸೋಂಪುರ ಹೋಬಳಿಯ ರೈತರ ಮೊಗ ದಲ್ಲಿ ಮಂದಹಾಸ ಮೂಡಿಸಿದೆ.
‘ವಿಳಂಬವಾಗಿ ರಾಗಿ ಬಿತ್ತನೆ ಮಾಡಲಾಗಿದ್ದು, ಸದ್ಯ ಕಳೆ ತೆಗೆಯುತ್ತಿದ್ದೇವೆ’ ಎಂದು ಹಾಲೇನಹಳ್ಳಿ ರೈತ ಶಿವ ಕುಮಾರ್ ಹೇಳಿದರು. 91 ಗ್ರಾಮಗಳಿರುವ ಸೋಂಪುರ ಹೋಬಳಿಯಲ್ಲಿ ಮಳೆಯಾಶ್ರಿತ ಬೆಳೆಗಳಾದ ರಾಗಿ, ಮುಸುಕಿನ ಜೋಳ, ತೊಗರಿ, ನೆಲಗಡಲೆ, ಅಲಸಂದೆ ರೀತಿಯ ಬೆಳೆಯನ್ನು ರೈತರು ಹೆಚ್ಚಾಗಿ ಬೆಳೆಯುತ್ತಾರೆ.
ಸೈನಿಕ ಹುಳು ಕಾಟದಿಂದ ಜೋಳ ಬೆಳೆಯುವುದನ್ನು ರೈತರು ಕಡಿಮೆ ಮಾಡಿದ್ದಾರೆ. ಸದ್ಯ ರಾಗಿಯೇ ಪ್ರಮುಖ ಬೆಳೆಯಾಗಿದ್ದು, 3,965 ಹೆಕ್ಟೇರ್ನಲ್ಲಿ ಬಿತ್ತನೆಯಾಗಿದೆ ಎಂದು ಕೃಷಿ ಇಲಾಖೆ ಅಂದಾಜಿಸಿದೆ.
‘ಸೈನಿಕ ಹುಳು ಕಾಟ ನಿವಾರಣೆಗೆ ರೈತ ಸಂಪರ್ಕ ಕೇಂದ್ರದಲ್ಲಿ ಔಷಧಿ ಲಭ್ಯವಿದೆ.’ ಎಂದು ಕೃಷಿ ಅಧಿಕಾರಿ ಆನಂದ್ ತಿಳಿಸಿದರು.