ಬೆಂಗಳೂರು: ನಗರದಲ್ಲಿ ರಾಜಕಾಲುವೆ ಒತ್ತುವರಿ ಕಾರ್ಯಾಚರಣೆಯನ್ನು ತ್ವರಿತವಾಗಿ ನಡೆಸಬೇಕು ಎಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಬಿಬಿಎಂಪಿ ಅಧಿಕಾರಿಗಳಿಗೆ ಮತ್ತೊಮ್ಮೆ ಸೂಚನೆ ನೀಡಿದ್ದಾರೆ.
ಬೃಹತ್ ನೀರುಗಾಲುವೆಗಳ ಒತ್ತುವರಿ ತೆರವು ಕಾರ್ಯಚರಣೆಗೆ ಸಂಬಂಧಿಸಿದಂತೆ ಅಧಿಕಾರಿಗಳ ಸಭೆ ನಡೆಸಿದ ಅವರು, ಎಂಟೂ ವಲಯಗಳಲ್ಲಿ ಬಾಕಿಯಿರುವ ಒತ್ತುವರಿಯನ್ನು ತೆರವುಮಾಡಬೇಕು. ಎಲ್ಲಿಯೂ ಜಲಾವೃತವಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.
2015-16ರಿಂದ ಇದುವರೆಗೆ ಒಟ್ಟಾರೆ 2,951 ಒತ್ತುವರಿಗಳನ್ನು ಗುರುತಿಸಲಾಗಿದೆ. ಈ ಪೈಕಿ 2,183 ಒತ್ತುವರಿಗಳನ್ನುತೆರವುಗೊಳಿಸಲಾಗಿದ್ದು, 768 ಬಾಕಿ ಉಳಿದಿವೆ. ಇದರಲ್ಲಿ 123 ಪ್ರಕರಣಗಳು ನ್ಯಾಯಾಲಯಕ್ಕೆ ಸಂಬಂಧಿಸಿದ್ದಾಗಿದ್ದು, 568 ಒತ್ತುವರಿಗಳ ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಭೂಮಾಪಕರಿಂದ ಮಾರ್ಕಿಂಗ್ ಪ್ರಕ್ರಿಯೆ ನಡೆದಿದೆ. ತಹಶೀಲ್ದಾರರಿಂದ ನೋಟಿಸ್ ನೀಡಲಾಗುತ್ತಿದೆ. ಹಂತ-ಹಂತವಾಗಿ ತ್ವರಿತಗತಿಯಲ್ಲಿ ಎಲ್ಲ ಅನಧಿಕೃತ ಒತ್ತುವರಿಗಳ ತೆರವು ಕಾರ್ಯಚರಣೆ ಕಾರ್ಯ ನಡೆಯಲಿದೆ ಎಂದು ಅಧಿಕಾರಿಗಳು ಹಿಂದಿನ ಮಾಹಿತಿಯನ್ನೇ ನೀಡಿದರು.
ತೆರವು: ಪುಲಕೇಶಿನಗರ ಕ್ಷೇತ್ರದ ಶಾಂಪುರ ವ್ಯಾಪ್ತಿಯಲ್ಲಿ ನೀರುಗಾಲುವೆ ಒತ್ತುವರಿಯನ್ನು ತೆರವು ಮಾಡಲಾಯಿತು. ಸರ್ವೆ ಸಂಖ್ಯೆ 6, 12 ಮತ್ತು 12 ಸೇರಿದಂತೆ ಸುಮಾರು 700 ಮೀಟರ್ ಉದ್ದದ ನೀರುಗಾಲುವೆಯ ಮೇಲೆ 13 ಕಟ್ಟಡಗಳನ್ನು ನಿರ್ಮಾಣ ಮಾಡಿಕೊಂಡಿದ್ದು, ತಹಶೀಲ್ದಾರ್ ಅವರಿಂದ ನೋಟೀಸ್ ಕೂಡ ನೀಡಲಾಗಿತ್ತು.
ಮಹದೇವಪುರ ವಲಯ ಕಾಡುಗೋಡಿ ವಾರ್ಡ್ ಚನ್ನಸಂದ್ರ ವ್ಯಾಪ್ತಿಯಲ್ಲಿ ಸುಮಾರು 30 ಮೀಟರ್ ಉದ್ದದ ರಾಜಕಾಲುವೆಯಲ್ಲಿ ನಿರ್ಮಾಣ ಮಾಡಿಕೊಂಡಿದ್ದ ಮಳಿಗೆಗಳನ್ನು, ಸ್ವಪ್ರೇರಿತವಾಗಿ ಅವರೇ ತೆರವು ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.