ಬೆಂಗಳೂರು: ಡಾ.ರಾಜ್ಕುಮಾರ್ ಸಮಾಧಿ ಸ್ಥಳವನ್ನು ಅಂತರ ರಾಷ್ಟ್ರೀಯ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು ಮತ್ತು ಅಂಬರೀಷ್ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪನೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒಪ್ಪಿಗೆ ನೀಡಿದ್ದಾರೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸೋಮವಾರ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಈ ಸಂಬಂಧ ಮನವಿಯನ್ನು ಸಲ್ಲಿಸಿತ್ತು. ಬೇಡಿಕೆಗಳಿಗೆ ಮುಖ್ಯಮಂತ್ರಿಯವರು ಸಕಾರಾತ್ಮಕ ವಾಗಿ ಸ್ಪಂದಿಸಿದರು ಎಂದು ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಡಾ.ರಾಜ್ ಕುಮಾರ್ ಸಮಾಧಿ ಪ್ರವಾಸೋದ್ಯಮ ತಾಣವಾಗಿದೆ. ಇದನ್ನುಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಬೇಕು. ಈ ಯೋಜನೆಗೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಒಪ್ಪಿಗೆ ನೀಡಿದ್ದರು. ಅದಕ್ಕೆ ₹22 ಕೋಟಿ ಅನುದಾನ ಕೊಡಲು ಸಮ್ಮತಿ ನೀಡಿದ್ದರು. ಮೊದಲ ಹಂತವಾಗಿ ಬಜೆಟ್ನಲ್ಲಿ ₹10 ಕೋಟಿ ಅನುದಾನವನ್ನೂ ನಿಗದಿ ಮಾಡಿದ್ದರು ಎಂದು ಹೇಳಿದರು.
ಈ ವಿಷಯವನ್ನು ಯಡಿಯೂರಪ್ಪ ಅವರ ಗಮನಕ್ಕೆ ತಂದಾಗ ತಕ್ಷಣವೇ ಒಪ್ಪಿಕೊಂಡರು. ಅಂಬರೀಷ್ ಪ್ರತಿಷ್ಠಾನಕ್ಕೂ ಒಂದು ಟ್ರಸ್ಟ್ ರಚನೆ ಆಗಬೇಕಿದೆ. ನ. 24 ರೊಳಗೆ ಟ್ರಸ್ಟ್ ರಚಿಸಬೇಕು ಎಂದು ಮನವಿ ಮಾಡಿದ್ದು, ಟ್ರಸ್ಟ್ ರಚನೆಯ ಭರವಸೆಯನ್ನೂ ನೀಡಿದ್ದಾರೆ ಎಂದರು.