ಬೊಮ್ಮನಹಳ್ಳಿ: ಬನ್ನೇರುಘಟ್ಟ ರಸ್ತೆ ಅರಕೆರೆಯಲ್ಲಿ ಆಟೊ ಚಾಲಕರು ‘ಪ್ರಜಾವಾಣಿ’ ಪತ್ರಿಕೆ ವಿತರಿಸುವ ಮೂಲಕ ಕನ್ನಡ ರಾಜ್ಯೋತ್ಸವ ಆಚರಿಸಿದರು.
ಕೃಷ್ಣಕುಟೀರ ಸರ್ಕಲ್ನಲ್ಲಿ ಕನ್ನಡ ಧ್ವಜ ಹಾರಿಸಿ, ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸಿದ ಆಟೊ ಚಾಲಕರು, ಸಿಹಿ ಹಂಚುವ ಜತೆಗೆ ಸಾರ್ವಜನಿಕರಿಗೆ ಪ್ರಜಾವಾಣಿ ಪತ್ರಿಕೆಯನ್ನು ಉಚಿತವಾಗಿ ನೀಡಿ ಖುಷಿಪಟ್ಟರು.
‘ಕನ್ನಡ ನಾಡು ನುಡಿಗೆ ಪ್ರಜಾವಾಣಿ ದೊಡ್ಡ ಕೊಡುಗೆ ನೀಡಿದೆ. ಪತ್ರಿಕೆಯ ಜತೆ ನಮಗೆ ಭಾವನಾತ್ಮಕ ಸಂಬಂಧ ಇದೆ. ಹೀಗಾಗಿಯೇ ನಾವು ಪತ್ರಿಕೆ ಹಂಚಿ ರಾಜ್ಯೋತ್ಸವ ಆಚರಿಸಿದೆವು‘ ಎಂದು ಆಟೊ ಚಾಲಕರು ಹೇಳಿದರು. ಮುಖ್ಯ ಅತಿಥಿ ಬಿಜೆಪಿ ಮುಖಂಡ ಮುರಳೀಧರ್ ‘ರಾಜ್ಯೋತ್ಸವವನ್ನು ಹೀಗೂ ಆಚರಿಸಬಹುದು ಎಂದು ಆಟೊ ಚಾಲಕರು ತೋರಿಸಿಕೊಟ್ಟಿದ್ದಾರೆ. ಪತ್ರಿಕೆ ದೀರ್ಘ ಕಾಲದಿಂದ ಓದುಗರ ವಿಶ್ವಾಸ ಉಳಿಸಿಕೊಂಡು ಬಂದಿದೆ’ ಎಂದರು.