ಬೆಂಗಳೂರು: ‘ಇಂದಿನ ಯುವ ಉದ್ಯೋಗಿಗಳು ತಾಂತ್ರಿಕ ಮತ್ತು ಡಿಜಿಟಲ್ ಕೌಶಲಗಳನ್ನು ಅಳವಡಿಸಿಕೊಂಡು ಮೂಲ ಸೌಕರ್ಯ ಅಭಿವೃದ್ಥಿ ಮತ್ತು ದೇಶದ ಜಿಡಿಪಿ ಬೆಳವಣಿಗೆಗೆ ಕೈಜೋಡಿಸಬೇಕು’ ಎಂದು ವೋಲ್ವೋ ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕಮಲ್ ಬಾಲಿ ಹೇಳಿದರು.
ಇತ್ತೀಚಿಗೆ ನಡೆದ ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನ 26ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ‘ವಿದ್ಯಾರ್ಥಿಗಳು ನೈತಿಕ ಮೌಲ್ಯಗಳೊಂದಿಗೆ ನವೀನತೆ ಮತ್ತು ಬೆಳವಣಿಗೆಯನ್ನು ಉತ್ತೇಜಿಸುವ ಸಮತೋಲಿತ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ 172 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಉತ್ತಮ ಶೈಕ್ಷಣಿಕ ಸಾಧನೆ ಮಾಡಿದ ಧನಂಜಯ ವಿ. ಅವರಿಗೆ ಚಿನ್ನದ ಪದಕ ಪ್ರದಾನ ಮಾಡಲಾಯಿತು. ಶ್ರೇಷ್ಠ ವಿದ್ಯಾರ್ಥಿಯಾಗಿ ಆಯ್ಕೆಯಾದ ಪೂಜಾ ಓಹ್ಜಾ ಅವರನ್ನು ಸನ್ಮಾನಿಸಲಾಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಿ.ಎಸ್. ರಾಮಪ್ರಸಾದ್ ಮಾತನಾಡಿದರು. ಸಂಸ್ಥೆಯ ನಿರ್ದೇಶಕರಾದ ಎಂ.ಆರ್. ಆನಂದರಾಮ್, ಜಿ. ರಾಮಚಂದ್ರ, ಶೈಕ್ಷಣಿಕ ಸಂಶೋದನೆ ಮತ್ತು ಆಡಳಿತದ ನಿರ್ದೇಶಕರಾದ ಮಾನಸ ನಾಗಭೂಷಣಂ, ಮೌಲ್ಯಮಾಪನ ಕುಲಸಚಿವೆ ಸವಿತಾ ರಾಣಿ ರಾಮಚಂದ್ರನ್ ಇದ್ದರು.