ಬೆಂಗಳೂರು: ಲಾಕ್ಡೌನ್ನಿಂದ ಆಹಾರ ಸಮಸ್ಯೆ ಎದುರಿಸುತ್ತಿದ್ದ ಆನೇಕಲ್, ಜಿಗಣಿ, ಬೊಮ್ಮಸಂದ್ರ ಹಾಗೂ ಬನ್ನೇರುಘಟ್ಟ ಕೈಗಾರಿಕಾ ಪ್ರದೇಶಗಳಲ್ಲಿ ನೆಲೆಸಿರುವ ವಲಸೆ ಕಾರ್ಮಿಕರು ಹಾಗೂ ದಿನಗೂಲಿ ನೌಕರರಿಗೆ ಶಿವನಹಳ್ಳಿಯ ರಾಮಕೃಷ್ಣ ಮಿಷನ್ ವತಿಯಿಂದ ನಿತ್ಯ ಆಹಾರ ವಿತರಿಸಲಾಗುತ್ತಿದೆ.
ಜಿಗಣಿ ಹಾಗೂ ಹೆಬ್ಬಗೋಡಿ ಪೊಲೀಸರ ನೆರವಿನಿಂದ ಆಯಾ ಪ್ರದೇಶಗಳಲ್ಲಿ ನೆಲೆಸಿರುವ ವಲಸೆ ಕಾರ್ಮಿಕರ ಮಾಹಿತಿ ಪಡೆದು, ಪ್ರತಿನಿತ್ಯ ಆಹಾರ ವಿತರಣೆ ಮಾಡಲಾಗುತ್ತಿದೆ. ಲಾಕ್ಡೌನ್ ಜಾರಿಯಾದ ಮೊದಲಿಗೆ ದಿನಕ್ಕೆ 700 ಮಂದಿಗೆ ಆಹಾರ ವಿತರಿಸಲಾಯಿತು. ಈಗ ಒಂದು ದಿನಕ್ಕೆ 11 ಸಾವಿರ ಮಂದಿಗೆ ಸಿದ್ಧ ಆಹಾರದ ಪೊಟ್ಟಣಗಳನ್ನು ಕೊಳೆಗೇರಿಗಳು ಹಾಗೂ ಶೆಡ್ಗಳ ಬಳಿಗೆ ತೆರಳಿ ತಲುಪಿಸಲಾಗುತ್ತಿದೆ.
'ಇನ್ಫೊಸಿಸ್ ಪ್ರತಿಷ್ಠಾನ ಹಾಗೂ ಹಲವು ಸಂಘಟನೆಗಳ ಸಹಕಾರದಿಂದ ಅಸಂಘಟಿತ ವಲಯದ ಕಾರ್ಮಿಕರಿಗೆ ಆಹಾರ ವಿತರಿಸಲಾಗುತ್ತಿದೆ. ಸಂಸ್ಥೆಯೊಂದಿಗೆ ರಾಗಿಹಳ್ಳಿ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಸ್ಥರು ಕೈಜೋಡಿಸುವ ಮೂಲಕ ಆಹಾರ ತಯಾರಿ ಹಾಗೂ ವಿತರಣೆ ಕಾರ್ಯಗಳಿಗೆ ನೆರವಾಗಿದ್ದಾರೆ. ಲಾಕ್ಡೌನ್ ಜಾರಿಯಾದಾಗಿನಿಂದ ಇಲ್ಲಿವರೆಗೆ 2.7 ಲಕ್ಷ ಮಂದಿಗೆ ಆಹಾರ ಪೊಟ್ಟಣಗಳನ್ನು ವಿತರಿಸಲಾಗಿದೆ' ಎಂದು ಸಂಸ್ಥೆಯ ಸ್ವಯಂಸೇವಕ ಮುರಳಿ ತಿಳಿಸಿದರು.