ಬೆಂಗಳೂರು: ‘ಯಾವುದೇ ಅರ್ಹತೆಯಿಲ್ಲದ ರೋಹಿತ್ ಚಕ್ರತೀರ್ಥ ಎಂಬ ವ್ಯಕ್ತಿಗೆ ಬಿಜೆಪಿ ಸರ್ಕಾರ ಶಾಲಾ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಜವಾಬ್ದಾರಿ ನೀಡಿದೆ. ಪಠ್ಯ ಪರಿಷ್ಕರಣೆ ನೆಪದಲ್ಲಿ ಮಹಾನ್ ವ್ಯಕ್ತಿಗಳಿಗೆ ಅಪಮಾನ ಮಾಡಿರುವ ಆತ ಒಬ್ಬ ವಿಕೃತ ಮನುಷ್ಯ. ಆತನನ್ನು ಗಡಿಪಾರು ಮಾಡಬೇಕು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ‘ಪಠ್ಯ ಪರಿಷ್ಕರಣೆ ಹೆಸರಲ್ಲಿ ಇತಿಹಾಸ ತಿರುಚುವ ಪ್ರಯತ್ನ ನಡೆಯುತ್ತಿದೆ. ಪಠ್ಯದಲ್ಲಿ ನಾಡಧ್ವಜಕ್ಕೆ ಅವಮಾನ ಮಾಡಲಾಗಿದೆ. ಚಕ್ರತೀರ್ಥ ಮೂಲಕ ಮಕ್ಕಳಲ್ಲಿ ಕೋಮುವಾದ ಬೇರೂರಿಸುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ’ ಎಂದು ಆರೋಪಿಸಿದರು.
‘ನಾಡಗೀತೆಗೆ ಅಪಮಾನ ಮಾಡಿ ರುವ ಚಕ್ರತೀರ್ಥ, ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ನಿಲುವು ಸಮರ್ಥಿಸಿಕೊಂಡಿದ್ದ. ಇಂಥವರನ್ನು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಗೆ ಅಧ್ಯಕ್ಷನನ್ನಾಗಿ ಮಾಡಿದರೆ ಏನಾಗುತ್ತದೆ ಎಂಬುದಕ್ಕೆ ಪಠ್ಯಪುಸ್ತಕ ವಿಚಾರದಲ್ಲಿ ಆಗಿರುವ ಗೊಂದಲಗಳೇ ಸಾಕ್ಷಿ’ ಎಂದು ಹೇಳಿದರು.