ಬೆಂಗಳೂರು: ‘ಜನಪದರು ತಮ್ಮ ನೋವು ನಲಿವುಗಳನ್ನು ಜನಪದ ಸಾಹಿತ್ಯದ ಮೂಲಕ ಅಭಿವ್ಯಕ್ತಪಡಿಸುತ್ತಿದ್ದರು. ಗೀತೆಗಳ ಮೂಲಕ ಸಮೂಹ ಪ್ರಜ್ಞೆಗೆ ಸಾಕ್ಷಿಯಾಗಿದ್ದರು’ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಟಿ.ತಿಮ್ಮೇಗೌಡ ತಿಳಿಸಿದರು.
ರಂಗಸಂಸ್ಥಾನದ ವತಿಯಿಂದ ಆಯೋಜಿಸಿದ್ದ ಸಮೂಹ ಗಾಯನ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಜನಪದರು ಜನಪದ ಸಾಹಿತ್ಯ ಸಮಾಜದ ಪ್ರತಿಸ್ಪಂದನ. ಕೃಷಿ ಚಟುವಟಿಕೆಯಲ್ಲಿ ತೊಡಗಿದ ಅವರು, ಶ್ರಮ ಪರಿಹಾರಾರ್ಥವಾಗಿ ಹಾಡುಗಳನ್ನು ಕಲಾತ್ಮಕವಾಗಿ ಕಟ್ಟಿಕೊಟ್ಟರು. ಆದರೆ, ಇಂದು ಜನಪದ ಸಾಹಿತ್ಯದ ಹೆಸರಲ್ಲಿ ಅಶ್ಲೀಲ ಸಾಹಿತ್ಯ ಸೃಷ್ಟಿಯಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.
ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ,‘ಜೀವನ, ಕಲೆ, ಸಂಸ್ಕೃತಿಗಳನ್ನೊಳಗೊಂಡ ಜನಪದ ಸಾಹಿತ್ಯ ಶಿಕ್ಷಣ ವಂಚಿತರನ್ನೂ ಸುಸಂಸ್ಕೃತರನ್ನಾಗಿ ಮಾಡುತ್ತದೆ. ಜನಪದ ಸಾಹಿತ್ಯ ಉಳಿವಿಗೆ ಸಮೂಹ ಗಾಯನಗಳು ಪೂರಕ’ ಎಂದರು.
ಗಾಯಕಿ ಚಂದ್ರಿಕಾ ಗುರುರಾಜ್, ‘ಕಂಠಗಳು ಭಿನ್ನವಾದರೂ ಧ್ವನಿಯೊಂದೇ. ಜನಪದ ಸಾಹಿತ್ಯದಿಂದ ಸ್ಫೂರ್ತಿಗೊಂಡು ಹಲವು ಸಾಹಿತ್ಯ ಪ್ರಕಾರಗಳು ರಚನೆಗೊಂಡಿವೆ’ ಎಂದರು.
ರಂಗ ಸಂಸ್ಥಾನದ ಅಧ್ಯಕ್ಷ ಬಂಡ್ಲಹಳ್ಳಿ ವಿಜಯಕುಮಾರ್, ಕನ್ನಡ ಪ್ರಾಧ್ಯಾಪಕ ರುದ್ರೇಶ್ ಅದರಂಗಿ ಇದ್ದರು.