ಸಂಸದರ ವೇತನ ಮತ್ತು ಭತ್ಯೆಗಳು ಮುಂದಿನ ತಿಂಗಳಿನಿಂದ ಹೆಚ್ಚಳವಾಗಲಿವೆ ಎಂದು ವರದಿಯಾಗಿದೆ (ಪ್ರ.ವಾ., ಮಾ. 1). ‘ಹಣದುಬ್ಬರದ ಬಾಧೆ (?) ಸರಿದೂಗಿಸುವ ಉದ್ದೇಶದಿಂದ ಐದು ವರ್ಷಕ್ಕೊಮ್ಮೆ ಸದಸ್ಯರ ವೇತನ ಹೆಚ್ಚಿಸುವ ಅಭಿಪ್ರಾಯವೂ ಸರ್ಕಾರಕ್ಕೆ ಇದೆ’ ಎಂದೂ ಸಚಿವರು ಹೇಳಿದ್ದಾರೆ.
ಸರ್ಕಾರಿ ಸಂಸ್ಥೆಗಳಲ್ಲಿ ದುಡಿಯುವ ಕಾರ್ಮಿಕರ ಬಗ್ಗೆ, ಶಾಲಾ–ಕಾಲೇಜುಗಳ ಅಧ್ಯಾಪಕರ ಬಗ್ಗೆ, ಸರ್ಕಾರಿ ಉದ್ಯೋಗಿಗಳ ಬಗ್ಗೆಯೂ ಕೇಂದ್ರ ಸರ್ಕಾರ ಇದೇ ಕಾಳಜಿಯನ್ನು ತೋರಿಸಿದರೆ ಶ್ಲಾಘನೀಯ ಎನಿಸುತ್ತಿತ್ತು.
ಸರ್ಕಾರಿ ಉದ್ಯೋಗಿಗಳು ಹತ್ತು ವರ್ಷಕ್ಕೊಮ್ಮೆ ಬರುವ ವೇತನ ಆಯೋಗದ ವರದಿಗೆ ಕಾಯಬೇಕು, ಸರ್ಕಾರಿ ಅಧೀನದ ಕೆಲವು ಸಂಸ್ಥೆಗಳ ಉದ್ಯೋಗಿಗಳು ದ್ವಿಪಕ್ಷೀಯ ಒಪ್ಪಂದಗಳಿಗೋ, ಸರ್ಕಾರದ ಕೃಪಾಕಟಾಕ್ಷಕ್ಕೋ ಕಾಯಬೇಕು ಅಥವಾ ಮುಷ್ಕರ– ಪ್ರತಿಭಟನೆಗೆ ಇಳಿಯಬೇಕು. ಅದೇ ಪರಿಸ್ಥಿತಿ ಕಾಲೇಜು-ಶಾಲಾ ಅಧ್ಯಾಪಕರದ್ದು. ಅವರಿಗೆಲ್ಲಾ ಹಣದುಬ್ಬರ ಬಾಧಿಸುವುದಿಲ್ಲವೇ?
ಸಂಸದರಿಗೆ ಸಂಬಳವಲ್ಲದೆ ಎಷ್ಟೆಲ್ಲಾ ಸೌಕರ್ಯಗಳು ಇವೆ ಎಂಬುದನ್ನು ಗಮನಿಸಿದರೆ, ಅವರಿಗೆ ವೇತನ ಏರಿಕೆ ಅಗತ್ಯವಿದೆಯೇ ಎಂದು ಅನಿಸದೆ ಇರದು. ಅನೇಕ ಸದಸ್ಯರು ಕೋಟ್ಯಧಿಪತಿಗಳು ಬೇರೆ!
–ಟಿ.ಆರ್. ಭಟ್, ಮಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.