ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸ್ಥಿತಿ ಎಷ್ಟೇ ಸಂದಿಗ್ಧವಾದರೂ ಎದುರಿಸಲು ಸಜ್ಜಾಗಿ: ಡಿಸಿಎಂ ಅಶ್ವತ್ಥನಾರಾಯಣ

ಬಿಬಿಎಂಪಿ ಆರೋಗ್ಯ ಕೇಂದ್ರಗಳ ಸನ್ನದ್ಧತೆ ಪರಿಶೀಲನೆ ಬಳಿಕ ಸೂಚನೆ
Last Updated 23 ಏಪ್ರಿಲ್ 2020, 14:29 IST
ಅಕ್ಷರ ಗಾತ್ರ

ಬೆಂಗಳೂರು: ಕೊವಿಡ್-19‌ ಹಿನ್ನೆಲೆಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿನ ಆರೋಗ್ಯ ಕೇಂದ್ರಗಳಲ್ಲಿ ಆಕ್ಸಿಜನ್‌ ಸೌಲಭ್ಯ ಸೇರಿದಂತೆ ಇತರ ಮೂಲಸೌಕರ್ಯ ಕಲ್ಪಿಸುವುದರ ಜತೆಗೆ, ಪರಿಸ್ಥಿತಿ ಎಷ್ಟೇ ಸಂದಿಗ್ಧವಾದರೂ ಅದನ್ನು ಎದುರಿಸಲು ಸಜ್ಜಾಗುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಸೂಚಿಸಿದರು.

ಕೊವಿಡ್‌-19ನಂಥ ಯಾವುದೇ ಸಾಂಕ್ರಾಮಿಕ ರೋಗಗಳನ್ನು ನಿರ್ವಹಿಸಲು ಬಿಬಿಎಂಪಿ ವ್ಯಾಪ್ತಿಯಲ್ಲಿನ ಆರೋಗ್ಯ ಕೇಂದ್ರಗಲ್ಲಿ ಅಗತ್ಯ ಇರುವ ಉಪಕರಣ ಸಂಗ್ರಹ, ನಿರ್ವಹಣೆ ಸೇರಿದಂತೆ ಚಿಕಿತ್ಸೆ, ಸೌಲಭ್ಯ ಹೆಚ್ಚಳಕ್ಕೆ ಕೈಗೊಳ್ಳಲಾದ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಡಾ. ಅಶ್ವತ್ಥನಾರಾಯಣ ಗುರುವಾರ ಸಭೆ ನಡೆಸಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ 133 ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, ಈ ಪೈಕಿ 48 ಕೇಂದ್ರ ವಲಯದಲ್ಲಿವೆ. ಸದ್ಯದ ಪರಿಸ್ಥಿತಿ ಎದುರಿಸಲು ಪ್ರತಿ ಕೇಂದ್ರಕ್ಕೆ ಪಾಲಿಕೆ ವತಿಯಿಂದ 50 ಸಾವಿರ ರೂ. ಬಿಡುಗಡೆ ಮಾಡಲಾಗಿದೆ.

ಡ್ಯಾಶ್‌ಬೋರ್ಡ್‌ ನಿರ್ವಹಣೆಗೆ ಸೂಚನೆ
ಕೊವಿಡ್‌-19ನಂಥ ಸಾಂಕ್ರಾಮಿಕ ರೋಗ ಹರಡುವ ಪರಿಸ್ಥಿತಿ ಯಾವುದೇ ಸಂದರ್ಭದಲ್ಲಿ ಎದುರಾದರೂ ಅದನ್ನು ಎದುರಿಸಲು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸಜ್ಜಾಗಿರಬೇಕು. ಈ ನಿಟ್ಟಿನಲ್ಲಿ ಆಸ್ಪತ್ರೆಗಳಲ್ಲಿ ಹಾಲಿ ಇರುವ ಸೌಕರ್ಯ ಹಾಗೂ ಅಗತ್ಯ ಇರುವ ಉಪಕರಣಗಳು ಹಾಗೂ ಇತರ ವ್ಯವಸ್ಥೆಯನ್ನು ಪಟ್ಟಿ ಮಾಡಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಜತೆಗೆ, ಸದ್ಯ ಕೇಂದ್ರದಲ್ಲಿ ಲಭ್ಯ ಇರುವ ಔಷಧ ದಾಸ್ತಾನು, ವೈದ್ಯಕೀಯ ಉಪಕರಣಗಳು, ಒದಗಿಸಿರುವ ಚಿಕಿತ್ಸೆ, ಆರೋಗ್ಯ ಸೇವೆಗಳ ಬಗ್ಗೆ ಡ್ಯಾಶ್‌ಬೋರ್ಡ್‌ ನಿರ್ವಹಣೆ ಮಾಡಲು ತಂತ್ರಜ್ಞಾನದ ನೆರವು ಪಡೆಯುವಂತೆಯೂ ತಿಳಿಸಿದರು.

ಆರೋಗ್ಯ ಕೇಂದ್ರಗಳಲ್ಲಿ ಸದ್ಯ ಇರುವ ಔಷಧ ಸಂಗ್ರಹ, ಮಾಸ್ಕ್‌, ಸ್ಯಾನಿಟೈಸರ್‌, ಪಿಪಿಇ ಕಿಟ್‌, ಸಿಬ್ಬಂದಿ ಬಗ್ಗೆ ಮಾಹಿತಿ ಪಡೆದು, ಅಗತ್ಯ ಇರುವ ಆಕ್ಸಿಜನ್‌ ವ್ಯವಸ್ಥೆ, ನೆಬ್ಯುಲೈಸರ್‌, ಹಾಸಿಗೆ ಸಾಮರ್ಥ್ಯ ಹೆಚ್ಚಳ, ಪ್ರಯೋಗಾಲಯ ಸೌಲಭ್ಯ ವಿಸ್ತರಣೆ ಹಾಗೂ ಹೆಚ್ಚುವರಿ ಔಷಧ ಸಂಗ್ರಹಕ್ಕೆ ಸೂಚನೆ ನೀಡಿದರು.

ಪರೀಕ್ಷಾ ಪ್ರಕ್ರಿಯೆಯಲ್ಲಿ ಮಾರ್ಪಾಟಿಗೆ ಸೂಚನೆ
ಈವರೆಗೆ ವಿದೇಶ ಪ್ರಯಾಣ ಮಾಡಿದವರು ಹಾಗೂ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿರುವರನ್ನು ಮಾತ್ರ ಪರೀಕ್ಷೆಗೆ ಒಳಪಡಿಸಲಾಗುತ್ತಿತ್ತು. ಇನ್ನು ಮುಂದೆ ಶೀತ, ನೆಗಡಿ, ಕೆಮ್ಮು (ಫ್ಲ್ಯೂ) ಲಕ್ಷಣಗಳಿದ್ದರೂ ಅವರನ್ನು ತಪಾಸಣೆಗೆ ಒಳಪಡಿಸಬೇಕು. ಜತೆಗೆ, ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ತೆರಳಿ ಆರೋಗ್ಯ ಸಮೀಕ್ಷೆ ಮಾಡಬೇಕು. ಪ್ರತಿ ದಿನ ಶಿಷ್ಟಾಚಾರ ಬದಲಾಗುತ್ತಿದ್ದು, ಅದನ್ನು ತಪ್ಪದೇ ಅನುಸರಿಸಬೇಕು. ಅಧಿಕಾರಿಗಳು ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ವ್ಯವಸ್ಥೆ ನಿರ್ವಹಣೆಗೆ ಮುಂದಾಗಬೇಕು. ಆರೋಗ್ಯ ಕಾರ್ಯಕರ್ತರಿಗೆ ಸಮಸ್ಯೆ ಎದುರಾದರೆ, ಅದಕ್ಕೆ ಸೂಕ್ತ ಪರಿಹಾರ ಒದಗಿಸಿ ಅವರಿಗೆ ಮಾನಸಿಕ ಸ್ಥೈರ್ಯ ತುಂಬುವ ಕೆಲಸ ಆಗಬೇಕು ಎಂದು ಸೂಚಿಸಿದರು.

ಪಾದಚಾರಿ ರಸ್ತೆಗಳ ಸ್ವಚ್ಛತೆ ಬಗ್ಗೆ ಆದ್ಯತೆ ನೀಡಿ ಆರೋಗ್ಯ ರಕ್ಷಣೆಗೆ ಮುಂದಾಗಬೇಕು. ಬೀದಿ ಬದಿ ವ್ಯಾಪಾರಿಗಳು ತ್ಯಾಜ್ಯವನ್ನು ರಸ್ತೆಗೆ ಎಸೆಯದಂತೆ ನೋಡಿಕೊಂಡು ಸ್ವಚ್ಛವಾಗಿಟ್ಟುಕೊಳ್ಳಬೇಕು. ಈ ಬಗ್ಗೆ ಸೂಕ್ತ ಯೋಜನೆ ರೂಪಿಸಲು ಉಪಮುಖ್ಯಮಂತ್ರಿ ನಿರ್ದೇಶಿಸಿದರು.

ಸಭೆಯಲ್ಲಿ ಮೇಯರ್‌ ಗೌತಮ್‌ ಕುಮಾರ್ ಜೈನ್‌, ಬಿಬಿಎಂಪಿ ಆಯುಕ್ತ ಅನಿಲ್‌ ಕುಮಾರ್‌ ಹಾಗೂ ಬಿಬಿಎಂಪಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್‌ ರಾಜು ಹಾಗೂ ಆರೋಗ್ಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT