ಬೆಳಗಾವಿ: ಯಾವುದೇ ಮುನ್ಸೂಚನೆ ನೀಡದೇ, ಗೋವಾ ಜನಪ್ರತಿನಿಧಿಗಳು ಖಾನಾಪುರ ತಾಲ್ಲೂಕಿನ ಕಳಸಾ ನಾಲಾ ಪ್ರದೇಶಕ್ಕೆ ಭೇಟಿ ನೀಡಿದ್ದರಿಂದ ಗಡಿಯಲ್ಲಿ ಚೆಕ್ಪೋಸ್ಟ್ ನಿರ್ಮಿಸಲು ಪೊಲೀಸ್ ಇಲಾಖೆ ಮುಂದಾಗಿದೆ.
ಕಳೆದ ಒಂದು ತಿಂಗಳಿನಲ್ಲಿ, ಗೋವಾ ಸಚಿವ ವಿನೋದ ಪಾಲ್ಯೇಕರ್, ವಿಧಾನಸಭಾಧ್ಯಕ್ಷ ಪ್ರಮೋದ ಸಾವಂತ ಸೇರಿದಂತೆ ಕೆಲವರು ಭೇಟಿ ನೀಡಿದ್ದರು. ಅವರು ಇಲ್ಲಿಗೆ ಬರುವುದಕ್ಕಿಂತ ಮುಂಚೆ ಜಿಲ್ಲಾಡಳಿತಕ್ಕಾಗಲಿ, ರಾಜ್ಯ ಸರ್ಕಾರಕ್ಕಾಗಲಿ ಮಾಹಿತಿ ನೀಡಿರಲಿಲ್ಲ.
ಗೋವಾ ಗಡಿಗೆ ಸಂಪರ್ಕ ಕಲ್ಪಿಸುವ ಜಾಂಬೋಟಿ, ಲೋಂಡಾ– ರಾಮನಗರ ಹಾಗೂ ಬೆಳಗುಂದಿ ರಸ್ತೆಯಲ್ಲಿ ಚೆಕ್ಪೋಸ್ಟ್ ನಿರ್ಮಿಸುವ ಸಾಧ್ಯತೆ ಇದೆ. ಇದರ ಜೊತೆ ಮೊಬೈಲ್ ನೆಟ್ವರ್ಕ್ ಹಾಗೂ ವೈರ್ಲೆಸ್ ಸಿಗ್ನಲ್ ಸಿಗುವ ಪ್ರದೇಶಗಳಿಗೆ ಆದ್ಯತೆ ನೀಡುತ್ತಿದ್ದಾರೆ.
ಶೀಘ್ರ ಚೆಕ್ಪೋಸ್ಟ್ ಸ್ಥಾಪನೆ:
‘ಮಹದಾಯಿ ಹೋರಾಟ ತೀವ್ರತೆ ಪಡೆಯುತ್ತಿದೆ. ನ್ಯಾಯಮಂಡಳಿಯ ತೀರ್ಪು ಸದ್ಯದಲ್ಲಿಯೇ ಹೊರಬೀಳುವ ನಿರೀಕ್ಷೆಯಿದೆ. ಈ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗದಂತೆ ನಿಗಾ ವಹಿಸಲು ಚೆಕ್ ಪೋಸ್ಟ್ ನಿರ್ಮಿಸಲಾಗುತ್ತಿದೆ. ರಾಜ್ಯದೊಳಗೆ ಬರುವ ಹಾಗೂ ಹೊರಹೋಗುವ ವಾಹನಗಳು ಹಾಗೂ ಜನರ ಮೇಲೆ ನಿಗಾ ವಹಿಸಲಾಗುವುದು’ ಎಂದು ಉತ್ತರ ವಲಯದ ಐಜಿಪಿ ಅಲೋಕ್ ಕುಮಾರ್ ’ಪ್ರಜಾವಾಣಿ’ಗೆ ತಿಳಿಸಿದರು.