ಬೆಂಗಳೂರು: ‘ಗ್ರಾಮೀಣ ಭಾರತದ ಕನಸುಗಳು ಮುರುಟಿ ಹೋಗುತ್ತಿರುವ ಈ ಸಮಯದಲ್ಲಿ ಅದರ ತಲ್ಲಣಗಳಿಗೆ ಲೇಖಕರು ಕನ್ನಡಿ ಹಿಡಿಯಬೇಕು’ ಎಂದು ಸಾಹಿತಿ ಹಾಗೂ ವೈದ್ಯ ಡಾ. ಮಿರ್ಜಾ ಬಷೀರ್ ಅಭಿಪ್ರಾಯಪಟ್ಟರು.
‘ಬಹುರೂಪಿ’ ಪ್ರಕಾಶನ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸರೋಜಿನಿ ಪಡಸಲಗಿ ಅವರ ‘ಡಾಕ್ಟರ್ ಹೆಂಡತಿ’ ಕೃತಿಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
‘ಗ್ರಾಮೀಣ ಭಾರತದಲ್ಲಿಯೇ ಸೇವೆ ಮಾಡಬೇಕೆಂದು ಆಯ್ಕೆ ಮಾಡಿಕೊಂಡು ಹೊರಟ ವೈದ್ಯರ ಅನುಭವ, ಹಾಗೆಯೇ ಅವರ ಕುಟುಂಬದ ಆತಂಕ, ತಲ್ಲಣಗಳು ಕೃತಿಯಲ್ಲಿವೆ’ ಎಂದು ತಿಳಿಸಿದರು.
ಕೃತಿ ಕುರಿತು ಮಾತನಾಡಿದ ಲೇಖಕಿ ವಾಸಂತಿ ಪ್ರಭಾಕರ ನಾಯಕ್, ‘ವೈದ್ಯ ವೃತ್ತಿ ವ್ಯಾಪಾರವಾಗಿರುವ ಇಂದಿನ ಸಂದರ್ಭದಲ್ಲಿ ಗ್ರಾಮೀಣ ಜನರ ಬದುಕು ಉಳಿಸಲು ಹೊರಟ ಈ ವೈದ್ಯ ಕುಟುಂಬದ ತಲ್ಲಣಗಳನ್ನು ಕಟ್ಟಿಕೊಡುವ ಈ ಪ್ರಯತ್ನ ಶ್ಲಾಘನೀಯ’ ಎಂದು ಅಭಿಪ್ರಾಯಪಟ್ಟರು.
‘ಆರೋಗ್ಯದ ಬೆಳಕಿನ ಕಿರಣಗಳು ಇಂದು ಎಲ್ಲರಿಗೂ ಸಿಗದ ಹತಾಶ ಪರಿಸ್ಥಿತಿ ಇದೆ. ಇಂತಹ ಸಮಯದಲ್ಲಿ ಈ ಕೃತಿ ಭರವಸೆ ಮೂಡಿಸುತ್ತದೆ’ ಎಂದರು.
ಲೇಖಕಿ ಸರೋಜಿನಿ ಪಡಸಲಗಿ, ‘ಇಲ್ಲಿ ನನ್ನ ಸಂಭ್ರಮ, ತಲ್ಲಣ ಎರಡೂ ಮಡುಗಟ್ಟಿವೆ’ ಎಂದರು.
‘ಬಹುರೂಪಿ’ ಮುಖ್ಯಸ್ಥ ಜಿ.ಎನ್. ಮೋಹನ್, ವೈದ್ಯ ಡಾ.ಸುರೇಶ್ ಪಡಸಲಗಿ ಇದ್ದರು.